ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಒಂದರ ಹಿಂದೆ ಒಂದರಂತೆ ಪ್ರೀತಿಯ ಕಾರಣಕ್ಕೆ ಇಬ್ಬರ ಯುವತಿಯರ ಹತ್ಯೆ ನಡೆದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತೆ. ನೇಹಾ ಹಿರೇಮಠ ಅನ್ನೋ ಯುವತಿಯನ್ನು ಕಾಲೇಜು ಕ್ಯಾಂಪಸ್ ನಲ್ಲಿ ಹತ್ಯೆ ಮಾಡಲಾಗುತ್ತೆ. ಇದು ಮುಂದೆ ಲವ್ ಜಿಹಾದ್ ಸ್ವರೂಪ ಪಡೆದುಕೊಂಡು ಭಾರೀ ಚರ್ಚೆಗೆ ಕಾರಣವಾಗುತ್ತೆ. ದೆಹಲಿಯಿಂದಲೂ ರಾಜಕೀಯ ನಾಯಕರು ಮೃತ ಯುವತಿ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವಾನ ಹೇಳುತ್ತಾರೆ.
ಇದಾದ ಕೆಲ ದಿನಗಳಲ್ಲೇ ಅಂಜಲಿ ಅಂಬಿಗೇರ ಅನ್ನೋ ಯುವತಿಯನ್ನು ಸಹ ಪ್ರೀತಿಯ ಕಾರಣಕ್ಕೆ ಮನೆಗೆ ನುಗ್ಗಿ ಹತ್ಯೆ ಮಾಡಲಾಗುತ್ತೆ. ಆದರೆ, ನೇಹಾ ಹಿರೇಮಠ ಪ್ರಕರಣದಲ್ಲಿ ಕೇಳಿ ಬಂದಷ್ಟು ತೀವ್ರವಾದ ಆಕ್ರೋಶ, ಜನ ಬೆಂಬಲ, ರಾಜಕೀಯ ಬೆಂಬಲ ಇಲ್ಲಿ ಸಿಗಿಲ್ಲ.
ಅದೇನೇ ಇರಲಿ. ಸಧ್ಯ ಈ ಎರಡು ಪ್ರಕರಣಗಳ ಪೊಲೀಸ್ ತನಿಖೆ ಎಲ್ಲಿಗೆ ಬಂದಿದೆ ಅನ್ನೋದು ಮುಖ್ಯವಾಗಿದೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಅನ್ನೋ ವಿದ್ಯಾರ್ಥಿಯನ್ನು ಫಯಾಜ್ ಅನ್ನೋ ಯುವಕ ಏಪ್ರಿಲ್ 18, 2024ರಂದು ಚಾಕುವಿನಿಂದ ಇರಿದು ಕೊಲೆ ಮಾಡುತ್ತಾನೆ. ನಂತರ ಅಲ್ಲಿನ ಜನರ ಕೈಗೆ ಸಿಕ್ಕು ಪೊಲೀಸರ ಅತಿಥಿಯಾಗಿದ್ದಾನೆ.
ವೀರಾಪುರ ಓಣಿಯ ನಿವಾಸಿ, ಹೆತ್ತವರು ಇಬ್ಬರನ್ನು ಕಳೆದುಕೊಂಡಿದ್ದ ಅಂಜಲಿ ಅಂಬಿಗೇರ ಅನ್ನೋ ಯುವತಿ ಸಹೋದರಿಯೊಂದಿಗೆ ಅಜ್ಜಿಯೊಂದಿಗೆ ವಾಸವಾಗಿದ್ದಳು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಯುವತಿಗೆ ಪ್ರೀತಿಸು ಎಂದು ಪೀಡಿಸುತ್ತಿದ್ದ ಗಿರೀಶ್ ಸಾವಂತ್ ಅನ್ನೋ ಯುವಕ ಮೇ 15ರಂದು ಮನೆಗೆ ನುಗ್ಗಿ ಚಾಕು ಚುಚ್ಚಿ ಕೊಲೆ ಮಾಡಿ ಪರಾರಿಯಾದ. ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಚಾಕುವಿನಿಂದ ಇರಿದ ವೇಳೆ ಸಿಕ್ಕಿಬಿದ್ದಿದ್ದ. ಬಳಿಕ ಅಂಜಲಿ ಅಂಬಿಗೇರ ಕೊಲೆ ಮಾಡಿದವನು ಇತನೆ ಎಂದು ತಿಳಿದು ಪೊಲೀಸರು ವಶಕ್ಕೆ ಪಡೆದರು.
ಈ ಎರಡು ಘಟನೆಗಳು ಪ್ರೀತಿಯ ಕಾರಣಕ್ಕೆ ಒಂದು ತಿಂಗಳ ಅಂತರದಲ್ಲಿ ನಡೆದಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇವರೆಗೂ ಪ್ರಕರಣದ ತನಿಖೆ ಎಲ್ಲಿಗೆ ಬಂದಿದೆ ಅನ್ನೋದರ ಕುರಿತು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಗಿಸಿ ಚಾರ್ಜ್ ಶೀಟ್ ನ್ನು ಕೋರ್ಟಿಗೆ ಸಲ್ಲಿಸಿರುವ ಬಗ್ಗೆಯೂ ಮಾಹಿತಿ ಇಲ್ಲ. ಹಂತಕರಿಗೆ ಯಾವ ಶಿಕ್ಷೆ ಆಗುತ್ತೆ? ಸಂತಸ್ತರಿಗೆ ನ್ಯಾಯ ಸಿಗುತ್ತಾ ಅನ್ನೋ ಪ್ರಶ್ನೆಗಳು ಕಾಡುತ್ತಲೇ ಇವೆ. ನಮ್ಮ ದಕ್ಷ ಪೊಲೀಸ್ ಅಧಿಕಾರಿಗಳು ಈ ಎರಡು ಕುಟುಂಬಗಳಿಗೆ ನ್ಯಾಯ ಕೊಡಿಸಿ ಕೊಲೆ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡುತ್ತಾರ ಕಾದು ನೋಡಬೇಕು.