ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 11 ವರ್ಷ ಪೂರೈಸಿದೆ. ಆದರೆ, ಶೂನ್ಯ ಸಾಧನೆ ಮಾಡಿದೆ. ಅವರು ಹೇಳಿದ್ದನ್ನೂ ಒಂದೂ ಮಾಡಿಲ್ಲ. ಹೀಗಾಗಿ ನಾನು ಶೂನ್ಯ ಅಂಕ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಟಿ.ಕೆ ಬಡಾವಣೆಯಲ್ಲಿರುವ ತಮ್ಮ ನಿವಾಸದ ಹತ್ತಿರ ಮಾತನಾಡಿದ ಮುಖ್ಯಮಂತ್ರಿ, ಒಳ್ಳೆಯ ದಿನಗಳು ಬರಲಿವೆ ಎಂದಿದ್ದರು, ಏನಾಯ್ತು? 500, 1000 ಮುಖ ಬೆಲೆ ನೋಟು ರದ್ದತಿಯಿಂದ ಯಾರಿಗೆ ಅನುಕೂಲವಾಯ್ತು? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಲ್ಲಿ ಎಂದು ಪ್ರಶ್ನಿಸಿದರು.
ನಮ್ಮ ಗ್ಯಾರೆಂಟಿ ಯೋಜನೆಗಳನ್ನು ಪೂರೈಸಲು ಆಗಲ್ಲ. ಸರ್ಕಾರಿ ದಿವಾಳಿಯಾಗುತ್ತೆ ಎಂದರು. ಆದರೆ, ಅವರೆ ಅವುಗಳನ್ನು ಕಾಪಿ ಮಾಡಿದರು. ದೆಹಲಿ, ಉತ್ತರ ಪ್ರದೇಶ, ರಾಜಸ್ತಾನ್, ಮಧ್ಯಪ್ರದೇಶದಲ್ಲಿ ಏನು ಮಾಡಿದರು? ಬರೀ ಸುಳ್ಳು ಹೇಳುತ್ತಾರೆ. ಮಾಧ್ಯಮದವರು ಹೆಚ್ಚು ಪ್ರಚಾರ ಕೊಡುತ್ತಾರೆ ಎಂದು ಹರಿಹಾಯ್ದರು.
ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಶೇ.50ರಷ್ಟು ತೆರಿಗೆ ಹಂಚಿಕೆ ಮಾಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಅವರೇ ಪ್ರಧಾನಿಗಳಾದಾಗ ಏನು ಮಾಡಿದರು? ನಿರ್ಮಲಾ ಸೀತಾರಾಮನ್ ಅವರು 5,300 ಕೋಟಿ ರೂಪಾಯಿಗಳನ್ನು ರಾಜ್ಯಕ್ಕೆ ಕೊಡುವುದಾಗಿ ಘೋಷಿಸಿ ಕೊಡಲಿಲ್ಲ. 15 ನೇ ಹಣಕಾಸು ಆಯೋಗದವರು ಕರ್ನಾಟಕಕ್ಕೆ 11,495 ಕೋಟಿ ರೂಪಾಯಿ ಕೊಡಬೇಕು ಎಂದು ಶಿಫಾರಸ್ಸು ಮಾಡಿದರೂ ಕೊಡಲಿಲ್ಲ. ರಾಜ್ಯ ಬಿಜೆಪಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು, ಅಪಪ್ರಚಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.