ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಭರ್ಜರಿ ಮಳೆಯಾಗುತ್ತಿದೆ. ಇದರಿಂದಾಗಿ ಜನರಿಗೆ ಮಲೆನಾಡಿನ ಅನುಭವ ಆಗುತ್ತಿದೆ. ಮತ್ತೊಂದು ಕಡೆ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾಳಾಗಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ 2 ಮನೆ ಭಾಗಶಃ ಹಾನಿ ಹಾಗೂ 1 ಎಮ್ಮೆ ಮೃತಪಟ್ಟ ಘಟನೆ ತಾಲೂಕಿನಲ್ಲಿ ನಡೆದಿದೆ ಎಂದು ತಾಲೂಕು ಆಡಳಿತ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.
ತಾಲೂಕಿನ ಹಂದಿಗನೂರ ಗ್ರಾಮದ ಶರಣಮ್ಮ ಮಡಿವಾಳಪ್ಪ ಜಂಬೆನಾಳ ಹಾಗೂ ಗಣಿಹಾರ ಗ್ರಾಮದ ಜಯಶ್ರೀ ಶೇವು ಪವಾರ ಎಂಬುವರ ಮನೆಗಳು ಭಾಗಶಃ ಹಾನಿಯಾಗಿವೆ. ಗುಬ್ಬೇವಾಡ ಗ್ರಾಮದ ಈರಯ್ಯ ಆದಯ್ಯ ಹಿರೇಮಠ ಎಂಬುವರ ಎಮ್ಮೆಯೊಂದು ಮೃತಪಟ್ಟಿದೆ ಎಂದು ತಾಲೂಕು ಆಡಳಿತ ಜಿಲ್ಲಾಧಿಕಾರಿಗಳಿಗೆ ನೀಡಿರುವ ವರದಿಯಲ್ಲಿ ತಿಳಿಸಿದೆ. ಇನ್ನು ಹೊಲದಲ್ಲಿನ ಬೆಳೆ ಹಾಳಾದ ಬಗ್ಗೆ ವರದಿ ನೀಡಬೇಕಿದೆ. ಸಾರ್ವಜನಿಕರು ಹೇಳುವ ಪ್ರಕಾರ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ ಎಂದು ತಿಳಿದು ಬಂದಿದೆ.