ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿ ಕಳ್ಳರು ಭರ್ಜರಿಯಾಗಿ ತಮ್ಮ ಕೈಚಳಕ ತೋರಿಸಿದ್ದಾರೆ. ಬಟ್ಟೆ ಹಾಗೂ ಆಭರಣ ಗಿರವಿ ಅಂಗಡಿ ಮಾಲೀಕರೊಬ್ಬರ ಮನೆಯಲ್ಲಿದ್ದ ಅಂದಾಜು 4 ಕೆಜಿ ಚಿನ್ನಾಭರಣ(Gold Jewelry) ಹಾಗೂ 5 ಲಕ್ಷ ರೂಪಾಯಿ ಕಳ್ಳತನ ಮಾಡಲಾಗಿದೆ. ರಾಜಕುಮಾರ್ ರಸ್ತೆಯಲ್ಲಿರುವ ವೇಣುಗೋಪಾಲ್ ಎಂಬುವರ ಮನೆಯಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ.
ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ವೇಣುಗೋಪಾಲ್ ಕುಟುಂಬ ಸಮೇತ ಭಾನುವಾರ ಸಂಜೆ 6.30ರ ಸುಮಾರಿಗೆ ಹೋಗಿದ್ದಾರೆ. ಇದೆಲ್ಲವನ್ನು ಗಮನಿಸಿದ ಕಳ್ಳರು ರಾತ್ರಿ 9.30ರಿಂದ 10.30ರ ನಡುವೆ ಹಿಂಬಾಗಿಲಿನ ಮೂಲಕ ಮನೆಗೆ ನುಗ್ಗಿ ಕಳ್ಳತನ(Theft) ಮಾಡಿದ್ದಾರೆ. ಅಲ್ಮೆರಾದ ಒಡೆದು ಅದರಲ್ಲಿದ್ದ ಸಣ್ಣ ಲಾಕೆರ್ ಸಮೇತ ಪರಾರಿಯಾಗಿದ್ದಾರೆ. ಮನೆಯವರು ರಾತ್ರಿ 11 ಗಂಟೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಟ್ಟೆ ಅಂಗಡಿ ಜೊತೆಗೆ ಗಿರವಿ ಅಂಗಡಿ ನಡೆಸುತ್ತಿದ್ದರು. ಜೊತೆಗೆ ವಾಸವಿದೇವಿ ದೇವಸ್ಥಾನದ ಖಜಾಂಚಿಯಾಗಿದ್ದರು. ದೇವಸ್ಥಾನಕ್ಕೆ ಸಂಬಂಧಿಸಿದ ಒಡವೆಗಳು ಹಾಗೂ ಗಿರವಿ ಒಡವೆಗಳು ಅದರಲ್ಲಿದ್ದವು ಅಂತಾ ಹೇಳಿದ್ದಾರೆ. ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.