ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪ್ರೆಸಿಡೆನ್ಸಿ ಯೂನಿವರ್ಸಿಟಿ ಬೆಂಗಳೂರು 7ನೇ ಘಟಿಕೋತ್ಸವ ಸಮಾರಂಭವು 29 ನವೆಂಬರ್ 2024, ಶುಕ್ರವಾರದಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು. ಕುಲಪತಿಗಳಾದ ಡಾ.ನಿಸ್ಸಾರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷರಾದ ಸುಹೇಲ್ ಅಹಮದ್ ಮತ್ತು ಸಲ್ಮಾನ್ ಅಹಮದ್, ನಿರ್ದೇಶಕಿ ಡಾ.ನಫೀಸಾ ಅಹಮದ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಆಚರಿಸಲಾಯಿತು. ಘಟಿಕೋತ್ಸವವು ಮ್ಯಾನೇಜ್ಮೆಂಟ್, ಕಾನೂನು, ಎಂಜಿನಿಯರಿಂಗ್, ವಿನ್ಯಾಸ, ಮಾಹಿತಿ ವಿಜ್ಞಾನ, ಮಾಧ್ಯಮ ಅಧ್ಯಯನ, ವಾಣಿಜ್ಯ ಮತ್ತು ಅರ್ಥಶಾಸ್ತ್ರ ಸೇರಿದಂತೆ ಎಂಟು ಪ್ರಮುಖ ನಿಕಾಯಗಳಿಗೆ ಸೇರಿದ 3,879 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ 19 ಚಿನ್ನದ ಪದಕ ವಿಜೇತರನ್ನು ಗೌರವಿಸಲಾಯಿತು. ಜೊತೆಗೆ 75 ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ರಾಕೇಶ್ ಸಿಂಗ್ ಅವರು ಮಾತನಾಡಿ, ಕಳೆದ ನಾಲ್ಕು ದಶಕಗಳಲ್ಲಿ ದೇಶ ಕಂಡಿರುವ ಬದಲಾವಣೆ, ರಾಷ್ಟ್ರ ಮತ್ತು ಪ್ರಪಂಚದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣದ ಮಹತ್ವವನ್ನು ಕುರಿತು ಹೇಳಿದರು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಪೋಷಕರು ಮಾಡಿದ ತ್ಯಾಗವನ್ನು ಎಂದಿಗೂ ಮರೆಯಬಾರದು. ಜೀವನದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಗುರಿಗಳನ್ನು ಸಾಧಿಸಲು ಸರಿಯಾದ ಮಾರ್ಗವನ್ನು ಅನುಸರಿಸಬೇಕಾಗಿದೆ ಎಂದು ಕಿವಿ ಮಾತು ಹೇಳಿದರು.
2023-24ರ ಶೈಕ್ಷಣಿಕ ವರ್ಷದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಸಾಧನೆಗಳನ್ನು ಕುರಿತು ವಾರ್ಷಿಕ ಶೈಕ್ಷಣಿಕ ವರದಿಯನ್ನು ಉಪಕುಲಪತಿ ಪ್ರೊ.ವಿಜಯನ್ ಇಮ್ಯಾನುಯೆಲ್ ಮಂಡಿಸಿದರು. ಈ ವರದಿಯಲ್ಲಿ ವಿಶ್ವವಿದ್ಯಾನಿಲಯವು 18 ನಿಕಾಯಗಳಲ್ಲಿ 52 ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿದ್ದು, ಅವುಗಳಲ್ಲಿ 40 ಯುಜಿ ಕಾರ್ಯಕ್ರಮಗಳು ಮತ್ತು 12 ಪಿಜಿ ಕಾರ್ಯಕ್ರಮಗಳು ಎಂದು ತಿಳಿಸಿದರು. ಕಳೆದ ಒಂದು ವರ್ಷದಲ್ಲಿ ವಿದ್ಯಾರ್ಥಿಗಳ ದಾಖಲಾತಿಯು ಶೇಕಡಾ 15ರಷ್ಟು ಗಮನಾರ್ಹ ಹೆಚ್ಚಳವನ್ನು ತೋರಿಸುತ್ತದೆ. ಈ ಪ್ರಗತಿಯು ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯವು ದೇಶಾದ್ಯಂತ ಅನೇಕ ವಿದ್ಯಾರ್ಥಿಗಳ ಅಪೇಕ್ಷಿತ ತಾಣವಾಗಿ ಪರಿಣಮಿಸಲಿಕ್ಕೆ ಸಾಕ್ಷಿಯಾಗಿದೆ.