ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ(Chitrdurga): ಕಂಟೈನರ್ ಹಾಗೂ ಸೀಬರ್ಡ್ ಬಸ್ ನಡುವೆ ಭೀಕರ ಬಸ್ ಅಪಘಾತವಾಗಿದೆ. ಇದರಿಂದಾಗಿ ವಾಹನಗಳು ಹೊತ್ತಿ ಉರಿದಿದ್ದು, 9 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಿರಿಯೂರು ಹತ್ತಿರದ ಜವನಗೊಂಡನಹಳ್ಳಿಯ ಗೊರ್ಲತ್ತು ಗ್ರಾಮದ ಹತ್ತಿರ ಇಂತಹೊಂದು ಭೀಕರ ಅಪಘಾತ ನಡೆದಿದೆ.
ಬೆಂಕಿ ಹೊತ್ತಿದ ಪರಿಣಾಮ ಪ್ರಯಾಣಿಕರು ಸಜೀವದಹನವಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೂರ್ವ ವಲಯ ಐಜಿ ರವಿಕಾಂತೇಗೌಡ ಅವರು ಹೇಳಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಹೊರಟಿತ್ತು, ಎದುರಿಗೆ ಬರುತ್ತಿದ್ದ ಕಂಟೈನರ್ ನಡುವೆ ಡಿಕ್ಕಿಯಾಗಿದೆ. ಗುರುವಾರ ನಸುಕಿನ ಜಾವ ಈ ಘಟನೆ ನಡೆದಿದೆ. 21 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಸೇರಿ 32 ಜನರಿದ್ದರು. ಇದರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಾನಸ ಹಾಗೂ ಗೆಳತಿ ನವ್ಯಾ ನಾಪತ್ತೆಯಾಗಿದ್ದಾರಂತೆ. ಕಂಟೈನರ್ ಚಾಲಕನ ಅಜಾಗರೂಕತೆಯಿಂದ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮೃತರ ಕುಟುಂಬಸ್ಥರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಮೃತರ ಕಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.




