ಪ್ರಜಾಸ್ತ್ರ ಸುದ್ದಿ
ಕಾರವಾರ(Karawara): ತರಕಾರಿ ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಬರೋಬ್ಬರಿ 9 ಜನರು ಮೃತಪಟ್ಟಿರುವ ದಾರುಣ ಘಟನೆ ಬುಧವಾರ ಮುಂಜಾನೆ ನಡೆದಿದೆ. ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದ ಹತ್ತಿರ ಅಪಘಾತ ಸಂಭವಿಸಿದೆ. ತರಕಾರಿಯ ಜೊತೆಗೆ ಲಾರಿಯಲ್ಲಿ 25ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು, ಚಾಲಕನ ನಿಯಂತ್ರ ತಪ್ಪಿ ಕಂದಕಕ್ಕೆ ಲಾರಿ ಉರುಳಿದೆ.
ಘಟನೆಯಲ್ಲಿ 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಮಟಾದಲ್ಲಿ ವಾರದ ಸಂತೆ ನಡೆಯುವ ಹಿನ್ನಲೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರಿನಿಂದ ತರಕಾರಿಯನ್ನು ಯಲ್ಲಾಪುರ ಮಾರ್ಗವಾಗಿ ತೆಗೆದುಕೊಂಡು ಹೊರಟಿದ್ದರು. ಮೃತರೆಲ್ಲ ತರಕಾರಿ ವ್ಯಾಪಾರಿಗಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.