ಪ್ರಜಾಸ್ತ್ರ ಸುದ್ದಿ
ಅಫ್ಜಲಪುರ(Afzalpur): ಗ್ರಾಮೀಣ ಭಾಗದಲ್ಲಿ ಇಂದಿಗೂ ತಾಕತ್ತು ಪ್ರದರ್ಶನ ಮಾಡುವ ಸಾಹಸದ ಚಟುವಟಿಕೆಗಳು, ಕ್ರೀಡೆಗಳು ಇವೆ. ಕೆಲವರು ಹತ್ತು ಹಲವು ರೀತಿಯಲ್ಲಿ ಸಾಹಸದ ಕೆಲಸ ಮಾಡುವ ಮೂಲಕ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅಂತಹ ವಿಶೇಷ ಯುವ ಪಡೆಯಲ್ಲಿ ಕಲಬುರಗಿ ಜಿಲ್ಲೆ ಅಫ್ಜಲಪುರ ತಾಲೂಕಿನ ಚಿನ್ಮಗೇರಾ ಗ್ರಾಮದ ಯುವಕ ಧರ್ಮಣ್ಣ ಮಾದರ ಕೂಡ ಒಬ್ಬ. ಕಳೆದ ಎರಡ್ಮೂರು ವರ್ಷಗಳಿಂದ ಧರ್ಮಣ್ಣ ಕೈಯಿಂದ ಹಾಗೂ ಹಣೆಯಿಂದ ತೆಂಗಿನಕಾಯಿ ಒಡೆಯುವುದು, ಬಣ್ಣದ ನೀರಿನಿಂದ ಸೂಜಿಯನ್ನು ಕಣ್ಣಿನಿಂದ ಹೊರಗೆ ತೆಗೆಯುವುದು ಮಾಡಿಕೊಂಡು ಬರುತ್ತಿದ್ದಾರೆ. ಈ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಗ್ರಾಮದಲ್ಲಿ ಇವರೆದೆ ಒಂದು ತಂಡವಿದ್ದು, ಹಲಗಿಯ ಸದ್ದಿನ ಜೊತೆಗೆ ತಾಕತ್ತು ಪ್ರದರ್ಶನ ಮಾಡುವುದರೊಂದಿಗೆ ವಿಶಿಷ್ಟವಾಗಿ ಧರ್ಮಣ್ಣ ಮಾದರ ಗುರುತಿಸಿಕೊಂಡಿದ್ದಾರೆ. ಕಲಬುರಗಿ, ವಿಜಯಪುರ, ಸಿಂದಗಿ, ಆಳಂದ, ನೆರೆಯ ಮಹಾರಾಷ್ಟ್ರದ ಅಕ್ಕಲಕೋಟದಲ್ಲಿಯೂ ತಮ್ಮ ಸಾಹಸವನ್ನು ಪ್ರದರ್ಶನ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ. ಇವರ ಸಾಹಸಕ್ಕೆ ಕುಟುಂಬಸ್ಥರು, ಸ್ನೇಹಿತರು, ಇವರ ತಂಡ ಸಾಥ್ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹಾಗೂ ವಿಭಿನ್ನ ಸಾಹಸ ಪ್ರದರ್ಶನ ಮಾಡುವ ಆಸೆಯನ್ನು ಇಟ್ಟುಕೊಂಡಿದ್ದಾರೆ.