ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿದ್ದ ಅನಿಯಮಿತ ಜಾಮೀನು ಸುಪ್ರೀಂ ಕೋರ್ಟ್ ರದ್ದು ಮಾಡಿದ್ದರಿಂದ ಪುನಃ ಜೈಲಿಗೆ ಹೋಗಿದ್ದಾರೆ. ಹೀಗಾಗಿ ಅವರ ದಿ ಡೆವಿಲ್ ಚಿತ್ರದ ಇದ್ರೆ ನೆಮ್ಮದಿಯಾಗಿ ಇರ್ಬೇಕು ಅನ್ನೋ ಸಾಂಗ್ ಆಗಸ್ಟ್ 15ರಂದು ರಿಲೀಸ್ ಆಗದೆ ಮುಂದೂಡಿದೆ. ಹೀಗಾಗಿ ನಟ ದರ್ಶನ್ ಜೈಲಿನಿಂದಲೇ ಅಭಿಮಾನಿಗಳಿಗೆ ಸಂದೇಶ ಕಳಿಸಿದ್ದಾರೆ. ಇದನ್ನು ಅವರ ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ. ನಾನು ವಿಜಯಲಕ್ಷ್ಮಿ ದರ್ಶನ್. ನಿಮ್ಮ ಪ್ರೀತಿಯ ದರ್ಶನ್ ರವರು ನಿಮಗೆ ಕಳಿಸಿರುವ ಸಂದೇಶ. ಕನ್ನಡ ಕಲಾಭಿಮಾನಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ ಪ್ರೀತಿಯ ದಾಸನ ಶಿರಸಾಷ್ಟಾಂಗ ನಮಸ್ಕಾರಗಳು. ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಜೀವನಪರ್ಯಂತ ಆಭಾರಿ. ನಾನೆ ಎಲ್ಲೆ ಇದ್ದರೂ ಹೇಗೆ ಇದ್ದರೂ ನಿಮ್ಮಗಳ ಶ್ರೇಯೋಭಿಲಾಯಷೆಯನ್ನೇ ಬಯಸುತ್ತೇನೆ. ಪ್ರಸಕ್ತ ವಿದ್ಯಮಾನ ಏನೇ ಇದ್ದರೂ, ನನ್ನ ನಂಬಿ ಕನಸು ಕಂಡಿರುವ ನಿರ್ದೇಶಕರ ಹಾಗೂ ನನ್ನ ಮೇಲೆ ಕೋಟ್ಯಾಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ. ಹಾಗಾಗಿ ನನ್ನ ‘ದಿ ಡೆವಿಲ್’ ಚಿತ್ರದ ಎಲ್ಲ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸಾಗಲಿ ಎಂಬುದು ನನ್ನ ಆಶಯ. ಹಾಗಾಗಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ. ಹಾಗೂ ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ದೃಢವಾಗಿ ನಂಬಿದ್ದೇನೆ. ಸಿನಿಮಾ ಒಂದು ಮನರಂಜನೆಯ ಮಾಧ್ಯಮ. ಅದನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಬೇಕು. ನಿಮ್ಮ ಪ್ರೀತಿಯ ದಾಸ. ಹೀಗೆ ಹೇಳಿದ್ದಾರೆ. ಇದನ್ನು ಅವರ ಪತ್ನಿ ಹಂಚಿಕೊಂಡಿದ್ದಾರೆ.