ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಬಾಲಿವುಡ್ ನಟ ಗೋವಿಂದ್(Actor Govinda) ಕಾಲಿಗೆ ಮಂಗಳವಾರ ನಸುಕಿನ ಜಾವದಲ್ಲಿ ಗುಂಡು ತಗುಲಿದೆ. ಈ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಏನಾಯ್ತು, ಗುಂಡು ಹಾರಿದ್ದು ಹೇಗೆ ಎನ್ನುವ ಪ್ರಶ್ನೆಗಳು ಶುರುವಾದವು. ನಸುಕಿನ ಜಾವ 4.45ರ ಸುಮಾರಿನಲ್ಲಿ ಗುಂಡು ಹಾರಿಸಿದ್ದು ಯಾರು ಎನ್ನುವ ಪ್ರಶ್ನೆಗೆ ಆಸ್ಪತ್ರೆಯಿಂದಲೇ ಅವರೆ ಸ್ಪಷ್ಟನೆ ನೀಡಿದ್ದಾರೆ.
ಸಧ್ಯ ಮುಂಬೈನ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಮೂಲಕ ಗುಂಡು ಹೊರ ತೆಗೆಯಲಾಗಿದೆ. ಮಂಗಳವಾರ ಕೊಲ್ಕತ್ತಾಗೆ ಹೋಗುವ ತಯಾರಿಯಲ್ಲಿದ್ದರು. ಆಗ ಪರವಾನಿಗೆ ಹೊಂದಿದ ಬಂದೂಕು ತೆಗೆದಿಡುವ ಸಂದರ್ಭದಲ್ಲಿ ಕೆಳಗೆ ಬಿದ್ದು ಬಂದೂಕಿನಿಂದ ಗುಂಡು ಹಾರಿದೆ ಎಂದು ಅವರ ಮ್ಯಾನೇಜರ್ ಶಶಿ ಸಿನ್ಹಾ ಹೇಳಿದ್ದಾರೆ. ಈ ಬಗ್ಗೆ ಆಡಿಯೋ ಮೂಲಕ ನಟ ಗೋವಿಂದ್ ಸಹ ತಿಳಿಸಿದ್ದಾರೆ.
ತಮಗೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ, ತಮ್ಮ ಆರೋಗ್ಯಕ್ಕಾಗಿ ಹಾರೈಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಮಗಳು ಟಿನಾ ಅಹುಜಾ ಈ ಬಗ್ಗೆ ಮಾಹಿತಿ ನೀಡಿದ್ದು, ತಂದೆಯವರು ಆರೋಗ್ಯವಾಗಿದ್ದಾರೆ. 24 ಗಂಟೆಗಳ ಕಾಲ ಐಸಿಯುನಲ್ಲಿ ಇರಲಿದ್ದಾರೆ ಎಂದು ಡಾಕ್ಟರ್ಸ್ ಹೇಳಿದ್ದಾರೆ ಅಂತಾ ತಿಳಿಸಿದ್ದಾರೆ.