ಪ್ರಜಾಸ್ತ್ರ ಸುದ್ದಿ
ಹಾರೋಹಳ್ಳಿ(Harohalli): ಪಟ್ಟಣ ಹಾಗೂ ಕೈಗಾರಿಕೆ ವ್ಯಾಪ್ತಿಯಲ್ಲಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಹಾರೋಹಳ್ಳಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ವೇತಾಬಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಗುತ್ತಿಗೆದಾರನಿಂದ ಹಣ ಕೇಳಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗುತ್ತಿಗೆದಾರ ವಿಶ್ವನಾಥ್ ತನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
2 ಕಿಲೋ ಮೀಟರ್ ಕೇಬಲ್ ಅಳವಡಿಕೆಗೆ ಆನೇಕಲ್ ಮೂಲದ ಈಶಾ ಎಂಟರ್ ಪ್ರೈಸಸ್ ಗುತ್ತಿಗೆದಾರ ವಿಶ್ವನಾಥ್ ಕೋರಿಕೊಂಡಿದ್ದಾನೆ. 1 ಕಿಲೋ ಮೀಟರ್ ಗೆ 2 ಲಕ್ಷ ರೂಪಾಯಿಯಂತೆ 4 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 3.50 ಲಕ್ಷಕ್ಕೆ ಒಪ್ಪಿಕೊಳ್ಳುತ್ತಾರೆ ಎನ್ನುವ ವಿಡಿಯೋ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಎಂದು ಸ್ವತಃ ಗುತ್ತಿಗೆದಾರ ಮಾಧ್ಯಮಗೋಷ್ಠಿ ನಡೆಸಿ ಈಗ ಹೇಳುತ್ತಿದ್ದಾನೆ.
ಶ್ವೇತಾಬಾಯಿ ಅವರು ಚಂದಾಪುರ ಪಟ್ಟಣ ಪಂಚಾಯ್ತಿಯಲ್ಲೂ ಮುಖ್ಯಾಧಿಕಾರಿಯಾಗಿದ್ದರು. ಆಗಿನಿಂದಲೂ ಪರಿಚಯ. ಅವರನ್ನು ರೇಗಿಸಲು ವಿಡಿಯೋ ಮಾಡಿದ್ದೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಆ ವಿಡಿಯೋವನ್ನು ನನ್ನ ಯುಟ್ಯೂಬ್ ಚಾನಲ್ ನಲ್ಲೂ ಅಪ್ ಲೋಡ್ ಮಾಡಿದ್ದೆ. ನಂತರ ಡಿಲಿಟ್ ಮಾಡಿದ್ದೇನೆ. ಮಾಧ್ಯಮಗಳಲ್ಲಿ ಪೂರ್ತಿ ತೋರಸದೆ ಕಟ್ ಮಾಡಿ ತೋರಿಸಲಾಗುತ್ತಿದೆ. ಈ ಬಗ್ಗೆ ನಾನು ಜಿಲ್ಲಾಧಿಕಾರಿ ಕಚೇರಿಗೆ ಸ್ಪಷ್ಟನೆ ಪತ್ರ ಸಲ್ಲಿಸಿದ್ದೇನೆ. ವಿಚಾರಣೆಗೆ ಕರೆದರೆ ಹೋಗುತ್ತೇನೆ ಎಂದು ಗುತ್ತಿಗೆದಾರ ವಿಶ್ವನಾಥ್ ಹೇಳುತ್ತಿದ್ದಾನೆ. ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದು ಗೊತ್ತಾಗಬೇಕಿದೆ.