ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮತ್ತೊಂದು ಕಳ್ಳತನ ಪ್ರಕರಣ ನಡೆದಿದೆ. ಪಟ್ಟಣದ ಶಾಂತೇಶ್ವರ ಬಡಾವಣೆಯಲ್ಲಿ ಸರಣಿ ಮನೆ ಕಳ್ಳತನ ನಡೆದಿದೆ. ಮಲ್ಲು ಬಿರಾದಾರ ಎಂಬುವರ ಮನೆಯಲ್ಲಿನ 70 ಗ್ರಾಂ ಚಿನ್ನಾಭರಣ ಹಾಗೂ 150 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಇನ್ನೊಂದು ಮನೆಯಲ್ಲಿ ಅರ್ಧ ತೊಲಿ ಬಂಗಾರ ಕಳ್ಳತನವಾಗಿದೆ ಎಂದು ಹೇಳಲಾಗುತ್ತಿದೆ.
ಸೋಮವಾರ ಮಧ್ಯರಾತ್ರಿ ಸುಮಾರು 12 ಕಳ್ಳರ ಗ್ಯಾಂಗ್ ನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಕಳ್ಳರ ಓಡಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿಕೊಂಡು ಕಳ್ಳತನ ನಡೆಸಲಾಗುತ್ತಿದೆ. ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ಪೊಲೀಸರಿಗೆ ಮಾಹಿತಿ ಬಂದಿದ್ದು, ಸ್ಥಳಕ್ಕೆ ಬಂದಿದ್ದಾರೆ. ಆಗ ಕಳ್ಳರು ಪರಾರಿಯಾಗಿದ್ದು, ಹಿಡಿಯಲು ಪ್ರಯತ್ನಿಸಿದರೂ ಸಿಗದೆ ತಪ್ಪಿಸಿಕೊಂಡು ಶುಭಂ ನಗರದ ಮೂಲಕ ಹಾದು ಹೋಗಿದ್ದಾರಂತೆ.
ಸ್ಥಳದಲ್ಲಿ ಸಿಪಿಐ, ಪಿಎಸ್ಐ ಸೇರಿದಂತೆ ಪೊಲೀಸ್ ತಂಡ ಬೀಡು ಬಿಟ್ಟಿದ್ದು, ತನಿಖೆ ನಡೆಸಲಾಗುತ್ತಿದೆ. ಡಾಗ್ ಸ್ಕ್ವಾಡ್ ಸಹ ಬಂದಿದೆ. ಜನವರಿ 18ರಂದು ಸಿಂದಗಿ ಪಟ್ಟಣದ ವಿದ್ಯಾನಗರ 4ನೇ ಕ್ರಾಸ್ ನಲ್ಲಿ ಹಾಡಹಗಲೇ ಕಳ್ಳತನ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಳ್ಳತನ ನಡೆದಿದೆ. ಇದರಿಂದಾಗಿ ತಾಲೂಕಿನಲ್ಲಿ ಜನತೆಯಲ್ಲಿ ಆತಂಕ ಮೂಡಿದೆ.




