ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮನಗೂಳಿ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಕಳೆದ ಮೇ 23 ರಿಂದ 25ರ ನಡುವಿನ ಅವಧಿಯಲ್ಲಿ ದರೋಡೆ ನಡೆದಿತ್ತು. ಆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿಯೇ ಬ್ಯಾಂಕ್ ಸಿನೀಯರ್ ಮ್ಯಾನೇಜರ್ ಆಗಿದ್ದಾನೆ. ಕೋಲಾರ ತಾಲೂಕಿನ ರೋಣಿಹಾಳ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ವಿಜಯಕುಮಾರ ಮೋಹನರಾದ ಮಿರಿಯಾಲ(41), ಚಂದ್ರಶೇಖರ ಕೊಟಿಲಿಂಗಮ್ ನೆರಲ್ಲಾ(38) ಹಾಗೂ ಸುನೀಲ ನರಸಿಂಹಲು ಮೋಕಾ(40) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿಜಯಕುಮಾರ ಮಿರಿಯಾಲ್ ಈ ಮೊದಲು ಮನಗೂಳಿ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ. ಇಲ್ಲಿಂದ ವರ್ಗಾವಣೆಯಾಗಿ ಹೋಗಿದ್ದ. ಚಂದ್ರಶೇಖರ ಸಹ ಈ ಮೊದಲು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಕೆಲಸ ಮಾಡಿದ್ದ. ಅಲ್ಲಿಯೂ ಹೀಗೆ ಮಾಡಿ ಸಿಕ್ಕಿಬಿದ್ದ ಎಂದು ಹೇಳಿದ್ದಾರೆ.
ಆರೋಪಿತರು ವ್ಯವಸ್ಥಿತವಾಗಿ ಒಳಸಂಚು ಮಾಡಿ ಬ್ಯಾಂಕಿನಲ್ಲಿದ್ದ ಬೃಹತ್ ಮೊತ್ತದ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದಲ್ಲದೇ, ತನಿಖೆಯ ದಿಕ್ಕು ತಪ್ಪಿಸುವಂತಹ ಹಲವಾರು ದೃಶ್ಯಾವಳಿಗಳನ್ನು ಸೃಷ್ಟಿಸಿದ್ದರು. 8 ತಂಡಗಳ ಅಧಿಕಾರಿ ಮತ್ತು ಸಿಬ್ಬಂದಿ ವೈಜ್ಞಾನಿಕ ರೀತಿಯಿಂದ ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಬ್ಯಾಂಕ್ನ ಕಿಟಕಿಯ ಸರಳುಗಳನ್ನು ಕಟ್ ಮಾಡಿ ಒಳಹೊಕ್ಕು, ಬ್ಯಾಂಕ್ ಸೇಫ್ ಲಾಕರ್ ರೂಮ್ನ ಗಿಲ್ನ ಸರಳುಗಳನ್ನು ಕಟ್ ಮಾಡಿ ಬೆಂಡ್ ಮಾಡಿ ಒಳ ಹೊಕ್ಕು, ಲಾಕರ್ನಲ್ಲಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆಜಿ (58,976.94 ಗ್ರಾಂ) ಬಂಗಾರದ ಆಭರಣಗಳು ಹಾಗೂ ನಗದು 5,20,450. ಹೀಗೆ ಒಟ್ಟು 53,31,20,450 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಲ್ಲದೇ ತಮ್ಮ ಗುರುತು ಪತ್ತೆ ಆಗದಂತೆ ಬ್ಯಾಂಕಿನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಎನ್.ವಿ.ಆರ್ ಸಹ ತೆಗೆದುಕೊಂಡು ಹೋಗಿದ್ದರು.
ಬಂಧಿತ ಆರೋಪಿತರಿಂದ ಕೃತ್ಯಕ್ಕೆ ಬಳಸಿದ 2 ಕಾರುಗಳು ಹಾಗೂ ಕಾರುಗಳಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 10 ಕೋಟಿ 75 ಲಕ್ಷ ರೂಪಾಯಿ ಮೌಲ್ಯದ 10.5 ಕೆ.ಜಿ ಬಂಗಾರದ ಆಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನುಳಿದವರ ಪತ್ತೆ ಕಾರ್ಯ ನಡೆದಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ. ಪ್ರಕರಣವನ್ನು ಭೇದಿಸಿರುವ ತನಿಖಾ ತಂಡಕ್ಕೆ ಎಸ್ಪಿ ಅವರು ಶ್ಲಾಘಿಸಿದ್ದಾರೆ.