ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ನಮ್ಮ ಸಾಕಷ್ಟು ಕಷ್ಟಗಳ ನಡುವೆಯೂ ಒಂದಿಷ್ಟು ಸಮಾಜಮುಖಿ ಕೆಲಸ ಮಾಡುವ ಗುಣ ಎಲ್ಲರಲ್ಲಿಯೂ ಬರಲ್ಲ. ಹಣದ ದಾಹ ಮನುಷ್ಯತ್ವ, ಮಾನವೀಯತೆ, ಒಳ್ಳಯತನವನ್ನೇ ಮಾರಾಟಕ್ಕೆ ಇಟ್ಟಿದೆ. ಇದರ ನಡುವೆ ಕೆಲವೊಬ್ಬರು ತಮ್ಮ ಸಮಸ್ಯೆ ಎಷ್ಟೇ ಇದ್ದರೂ ಪರಪೋಕಾರ ಗುಣ ಹೊಂದಿರುತ್ತಾರೆ. ಅಂತವರಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ ಆಶಾ ಕಾರ್ಯಕರ್ತೆ(Asha Worker) ಗಂಗಮ್ಮ ಲಗುಬಗಿ ಒಬ್ಬರು. ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ(Gruha Lakshmi Scheme) ಬಂದು 24 ಸಾವಿರ ರೂಪಾಯಿಗಳನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ನೀಡಿದ್ದಾರೆ.
ಆಶಾ ಕಾರ್ಯಕರ್ತರಿಗೆ ಕಡಿಮೆ ಗೌರವ ಧನವಿದೆ. ಅದರಲ್ಲಿ ಜೀವನ ನಿರ್ವಹಣೆ ಮಾಡಬೇಕು. ಗೃಹಲಕ್ಷ್ಮಿ ಯೋಜನೆಯಿಂದ ತಿಂಗಳಿಗೆ ಬರುವ 2 ಸಾವಿರ ರೂಪಾಯಿ ಒಂದಿಷ್ಟು ಆಸರೆಯಾಗುತ್ತೆ. ಅದನ್ನೇ ಕೂಡಿಟ್ಟು ತಮ್ಮೂರಿನ ಶಾಲೆಗೆ(School) ನೀಡಿ ಮಕ್ಕಳ ಒಳ್ಳೆಯ ಶಿಕ್ಷಣಕ್ಕೆ ಊರಿನವರೊಂದಿಗೆ ತಾವು ಕೈ ಜೋಡಿಸಿದ್ದಾರೆ. ಊರಿನವರು ಶಾಲೆಯ ಅಭಿವೃದ್ಧಿಗೆ ಸಹಾಯ ಮಾಡುತ್ತಿರುವುದು ನೋಡಿ ತಾನು ಒಂದಿಷ್ಟು ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಸಾರ್ಥಕ ಕೆಲಸ. ಗಂಗಮ್ಮ ಲಗುಬಗಿ ಹಾಗೂ ಪತಿಯನ್ನು ಶಾಲೆಯ ಎಸಿಡಿಎಂಸಿ ವತಿಯಿಂದ ಗೌರವಿಸಲಾಗಿದೆ. ಎಷ್ಟಿದ್ದರೂ ಇನ್ನೂ ಬೇಕೆನ್ನುವವರು ಇಂತವರಿಂದ ಪಾಠ ಕಲಿಯಬೇಕಿದೆ.