ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಎಂದಿನಂತೆ ಈ ಬಾರಿಯ ದಸರಾ ಕವಿಗೋಷ್ಠಿಯ ಬಗ್ಗೆ ಅಪಸ್ವರಗಳು ಎದ್ದಿವೆ. ಅವಕಾಶ ನೀಡಿದವರಿಗೆ ಮತ್ತೆ ಮತ್ತೆ ನೀಡಲಾಗಿದೆ. ಹೆಸರನ್ನು ತಪ್ಪಾಗಿ ಮುದ್ರಿಸಲಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದವರನ್ನು ಕಡೆಗಣಿಸಲಾಗಿದೆ ಎನ್ನುವ ಆಕ್ರೋಶ ಸಹ ವ್ಯಕ್ತವಾಗಿದೆ. ಆದರೆ, ಈ ಮೊದಲು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ಒಪ್ಪಿಕೊಂಡು ಈಗ ಭಾಗವಹಿಸುತ್ತಿಲ್ಲವೆಂದು ಹಿರಿಯ ಲೇಖಕಿ ಭಾನು ಮುಷ್ತಾಕ್ ಹೇಳಿದ್ದಾರೆ. ಭಾನುವಾರ ಈ ಬಗ್ಗೆ ಫೇಸ್ ಬುಕ್ ಪುಟದಲ್ಲಿ ಬರೆದಿದ್ದಾರೆ.
ಬಾನು ಮುಷ್ತಾಕ್ ಅವರ ಬರಹ ಹೀಗಿದೆ.. ‘ಮಾನ್ಯರೇ ನಾನು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ಒಪ್ಪಿದ್ದೆ. ಈ ಹಿಂದೆ ನಾನು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದೆ. ಆದರೆ, ಇತ್ತೀಚಿಗಿನ ಕೆಲವು ಸಂವಾದಗಳನ್ನು ಗಮನಿಸಿದಾಗ, ಬೇರೆಯವರಿಗೆ ಅವಕಾಶಗಳನ್ನು ಕೊಡುವುದು ಕೂಡಾ ಅಗತ್ಯ ಅಂತ ಅನಿಸಿದೆ. ಆದುದರಿಂದ ನಾನು 2024ರ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿದ್ದೇನೆ. ನಿಮಗೆ ಉಂಟಾಗಿರುವ ಅನಾನುಕೂಲಕ್ಕೆ ಕ್ಷಮೆ ಇರಲಿ’ ಎಂದು ಬರೆದಿದ್ದಾರೆ. ಅವರೆ ಹೇಳುವಂತೆ ಈ ಹಿಂದೆ ಭಾಗವಹಿಸಿದ್ದ ಮೇಲೆ ಮತ್ತೊಮ್ಮೆ ಒಪ್ಪಿಕೊಂಡು ಈಗ ಕೊನೆ ಗಳಿಗೆಯಲ್ಲಿ ಭಾಗವಹಿಸಲ್ಲ ಎಂದರೆ ಏನರ್ಥ ಎನ್ನುವ ಪ್ರಶ್ನೆ ಮೂಡಿದೆ. ಈಗಾಗ್ಲೇ ನನಗೆ ಅವಕಾಶ ಸಿಕ್ಕಿದೆ ಬೇರೆಯವರಿಗೆ ನೀಡಿ ಎಂದು ಮೊದಲೇ ಹೇಳಿದ್ದರೆ ಮತ್ತೊಬ್ಬರಿಗಾದರೂ ಅವಕಾಶ ಸಿಗುತ್ತಿತ್ತು ಅಲ್ಲವೇ?