ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಗುಮ್ಮಟನಗರಿ ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ಭರ್ಜರಿ ಮಳೆಯಾಗುತ್ತಿದೆ. ಭಾರಿ ಗುಡುಗು, ಸಿಡಿಲು ಸಮೇತ ವರುಣನ ಆರ್ಭಟ ಜೋರಾಗಿದೆ. ಅವಧಿಗೂ ಮೊದಲೇ ಮುಂಗಾರು ಬಂಗಾಳಕೊಲ್ಲಿ ಪ್ರವೇಶಿಸಿದೆಯಂತೆ. ಹೀಗಾಗಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆಯಂತೆ. ವಿಜಯಪುರ ನಗರ ಸೇರಿದಂತೆ ಸುತ್ತಲಿನ ಭಾಗದಲ್ಲಿ ಬಿರುಗಾಳಿಯಿಂದ ಕೂಡಿದ ಮಳೆ ಕಾಣಿಸಿಕೊಂಡಿದೆ.
ಶಿವಣಗಿ, ದೇವರ ಹಿಪ್ಪರಗಿ, ಸಿಂದಗಿ, ಇಂಡಿ, ಮುದ್ದೇಬಿಹಾಳ, ತಿಕೋಟಾ ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಂಗಳವಾರ ಸಂಜೆ ಭಾರೀ ಮಳೆಯಾಗಿದೆ. ಹಲವು ಕಡೆ ಭಾರಿ ಗುಡುಗು, ಸಿಡಿಲಿನೊಂದಿಗೆ ತೀವ್ರ ಮಳೆಯಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಸೋಮವಾರ ಸಂಜೆ ದೇವರ ಹಿಪ್ಪರಗಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಸಿಡಿಲಿಗೆ 23 ಕುರಿಗಳು ಮೃತಪಟ್ಟ ಘಟನೆ ನಡೆದಿದೆ. ಸಿಂದಗಿಯಲ್ಲಿ ಭಾನುವಾರ ರಾತ್ರಿ ಭಾರೀ ಮಳೆಯಾಗಿ ಹಲವು ಅಂಗಡಿಗಳಿಗೆ ನೀರು ನುಗ್ಗಿದ್ದವು. ಮಂಗಳವಾರವೂ ಭಾರೀ ಮಳೆ ಕಾಣಿಸಿಕೊಂಡಿದೆ.