ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದ ಸಚಿವರು ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಗಾಂಧಿವೃತ್ತದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿಜಯೋತ್ಸವ ವೇಳೆಯಲ್ಲಿ 11 ಜನ ಅಮಾಯಕರು ಪ್ರಾಣ ಬಿಟ್ಟಿದ್ದಾರೆ. ಅಲ್ಲದೆ, 50ಕ್ಕೂ ಅಧಿಕ ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸೂಕ್ತ ರಕ್ಷಣೆ ನೀಡಬೇಕಿದ್ದ ಸರ್ಕಾರ ಮತ್ತು ಗೃಹ ಇಲಾಖೆ ಎಡವಿದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸ್ ಇಲಾಖೆ ಅಧಿಕಾರಿಗಳ ತಲೆದಂಡ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಆರ್ಸಿಬಿ ವಿಜಯೋತ್ಸಕಕ್ಕೆ ಸೂಕ್ತ ಭದ್ರತೆ ನೀಡಬೇಕಿದ್ದ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಸರ್ಕಾರದಲ್ಲಿನ ಸಚಿವರು ತಮ್ಮ ಕುಟುಂಬ, ಬಂಧು ಬಳಗದ ಸೆಲ್ಫಿ ಆಸೆಗಾಗಿ ರಾಜ್ಯದ 11 ಜನರು ಬಲಿ ಪಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಸಿಎಂ, ಡಿಸಿಎಂ, ಗೃಹ ಸಚಿವರ ತಪ್ಪು ನಿರ್ಧಾರದಿಂದಲೇ ಜನ ಪ್ರಾಣ ಕಳೆದು ಕೊಂಡಿದ್ದಾರೆ ಎಂದು ದೂರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ ಮಾತನಾಡಿ, ಕಾಲ್ತುಳಿತ ಅನಾಹುತದ ಸಂಪೂರ್ಣ ಹೊಣೆಯನ್ನು ಸರ್ಕಾರ ಹೊರಬೇಕು ಎಂದರು. ಈ ವೇಳೆ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಮುಖಂಡರಾದ ಉಮೇಶ ಕೋಳಕೂರ, ಸುರೇಶ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿ, ಮಹೇಂದ್ರ ನಾಯಕ, ರಾಹುಲ ಜಾಧವ, ರಾಜು ಮಗಿಮಠ, ರಾಜೇಶ ತವಸೆ, ರವಿಕಾಂತ ಬಗಲಿ, ಪಾಪುಸಿಂಗ ರಜಪೂತ, ಶ್ರೀಹರ್ಷಗೌಡ ಪಾಟೀಲ, ಜಗದೀಶ ಮುಚ್ಚಂಡಿ, ಸ್ವಪ್ನಾ ಕಣಮುಚನಾಳ, ಭಾರತಿ ಭುಂಯ್ಯಾರ, ಭರತ ಕುಲಕರ್ಣಿ, ಸಂತೋಷ ನಿಂಬರಗಿ, ಕಲ್ಮೇಶ ಹಿರೇಮಠ, ವಿಠ್ಠಲ ನಡುವಿನಕೇರಿ, ರಾಮಚಂದ್ರ ಚವ್ಹಾಣ, ವಿಷ್ಣು ಜಾಧವ, ಸಾಗರ ಶೇರಖಾನ, ಶೀಲವಂತ ಉಮರಾಣಿ, ಚನ್ನು ಚಿನಗುಂಡಿ, ಶರಣಬಸು ಕುಂಬಾರ, ಸಂಪತ್ ಕೋಹಳ್ಳಿ, ರವಿ ಬಿರಾದಾರ, ಮಹೇಶ ಒಡೆಯರ, ಭೀಮಸಿಂಗ ರಾಠೋಡ, ವಾರೀಶ ಕುಲಕರ್ಣಿ, ಶ್ರೀಹರಿ ಕುಲಕರ್ಣಿ, ಪ್ರಮೋದ ಬಡಿಗೇರ, ಶಹಾನಾಜಾ, ಗೀತಾ ಚೌಧರಿ, ರೇಣುಕಾ ಹೊಸಮನಿ, ಭಾರತಿ ಶಿವಣಗಿ, ಶಾಂತಾ ಉತ್ಲಾಸರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.