ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಿಗೆ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಮೇ 25ರಂದು ಉಪ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ನಿಡಗುಂದಿ ತಾಲೂಕಿನ ವಂದಾಲ ಹಾಗೂ ಯಲಗೂರ, ಚಡಚಣ ತಾಲೂಕಿನ ನಿವರಗಿ, ತಾಳಿಕೋಟೆ ತಾಲೂಕಿನ ಹಿರೂರ, ತಿಕೋಟಾ ತಾಲೂಕಿನ ತಾಜಪುರ-ಹೆಚ್, ಆಲಮೇಲ ತಾಲೂಕಿನ ಬಮ್ಮನಹಳ್ಳಿ ಹಾಗೂ ದೇವರನಾವದಗಿ, ಇಂಡಿ ತಾಲೂಕಿನ ಭತಗುಣಕಿ ಹಾಗೂ ಲಚ್ಯಾಣ ಮತ್ತು ವಿಜಯಪುರ ತಾಲೂಕಿನ ನಾಗಠಾಣ ಗ್ರಾಮ ಪಂಚಾಯತಿಯ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ.
ಚುನಾವಣಾ ವೇಳಾ ಪಟ್ಟಿ: ಮೇ 14 (ಬುಧವಾರ) ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಮೇ 15ರಂದು (ಗುರುವಾರ) ನಾಮಪತ್ರಗಳ ಪರಿಶೀಲನೆ, ಮೇ 17 (ಶನಿವಾರ) ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನ. ಮೇ 25 ರಂದು (ಭಾನುವಾರ) ಬೆಳಿಗ್ಗೆ 7 ರಿಂದ ಸಂಜೆ 5ಗಂಟೆವರೆಗೆ ಅವಶ್ಯವಿದ್ದರೆ ಮತದಾನ ಹಾಗೂ ಮೇ 28(ಬುಧವಾರ) ಚುನಾವಣೆಯನ್ನು ಮುಕ್ತಾಯಗೊಳಿಸುವ ದಿನಾಂಕವನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ.