ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಪಾಕಿಸ್ತಾನದ ಮೇಲೆ ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ ಮೂಲಕ ವೈಮಾನಿಕ ದಾಳಿ ನಡೆಸಲಾಗಿದೆ. ಭಾರತೀಯ ಸೇನೆ ಮಧ್ಯರಾತ್ರಿ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ 9 ಶಿಬಿರಗಳನ್ನು ಧ್ವಂಸಗೊಳಿಸಿದೆ. ಈ ಹಿನ್ನಲೆಯಲ್ಲಿ ವಿಜಯಪುರದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.
ನಗರದ ಶಿವಾಜಿ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಿದ ಯುವಕರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಭಾರತ ಮಾತಾ ಕಿ ಜೈ, ವಂದೇ ಮಾತರಂ ಎಂಬ ಘೋಷಣೆ ಜೊತೆಗೆ ಬಸವೇಶ್ವರ, ಶಿವಾಜಿ ಮಹಾರಾಜ ಹಾಗೂ ರಾಣಾ ಪ್ರತಾಪ್ ಸಿಂಗ್ ಹೆಸರಿನಲ್ಲಿ ಘೋಷಣೆ ಮೊಳಗಿಸಿದರು. ತ್ರೀವರ್ಣ ಧ್ವಜ ಹಿಡಿದು ಭಾರತದ ಪರ ಘೋಷಣೆ ಹಾಕಿದರು. ಈ ವೇಳೆ ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಈರಣ್ಣಾ ಪಟ್ಟಣಶೆಟ್ಟಿ, ಜಗದೀಶ ಮುಚ್ವಂಡಿ, ಸತೀಶ್ ಪಾಟೀಲ, ಬಾಬು ಜಗದಾಳೆ, ಸಂತೋಷ ಕವಲ್ದಾರ, ಸಂದೀಪ ಪಾಟೀಲ, ಪ್ರಭಾಕರ ಭೊಸ್ಲೆ, ಅಖಿಲ್ ಶೀಲವಂತ, ಗುರು ಗೋಲಗೇರಿ, ವಿಜಯಪುರ ನಗರದ ಗಜಾನನ ಮಹಾಮಂಡಳ ಪದಾಧಿಕಾರಿಗಳು ಹಾಗೂ ಯುವಕರು ಉಪಸ್ಥಿತರಿದ್ದರು.