ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಐಪಿಎಲ್-2025ರ ಫೈನಲ್ ಪಂದ್ಯ ಮಂಗಳವಾರ ಸಂಜೆ 7.30ಕ್ಕೆ ಅಹಮದಾಬಾದ್ ನಲ್ಲಿ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಪಂಜಾಬ್ ನಡುವೆ ಕದನ ನಡೆಯಲಿದೆ. ಆರ್ ಸಿಬಿ ಕಪ್ ಗೆಲ್ಲಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಿನಿಮಾ ನಟರು ಸೇರಿದಂತೆ ಎಲ್ಲರೂ ಶುಭ ಕೋರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಈ ಬಾರಿ ಐಪಿಎಲ್ ಗೆಲ್ಲುವ ಅರ್ಹತೆ ಮತ್ತು ತಾಕತ್ತು ಆರ್ ಸಿಬಿಗೆ ಇದೆ. ಇಂದಿನ ಒಂದು ಪಂದ್ಯದ ಗೆಲುವು ಕೋಟ್ಯಾಂತರ ಅಭಿಮಾನಿಗಳ 18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಲಿದೆ ಎನ್ನುವುದು ನನ್ನ ಭಾವನೆ ಎಂದಿದ್ದಾರೆ. ಕಳೆದ 18 ವರ್ಷಗಳಿಂದ ಅಭಿಮಾನಿಗಳು ಕಾಯುತ್ತಿರುವ ಕ್ಷಣ ಬಂದಿದೆ. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಗೆ ಬಂದಿದೆ. ಇದು ಬರೀ ಜರ್ಸಿ ಅಲ್ಲ. ಲಕ್ಷಾಂತರ ಜನರ ಕನಸು. ಕರ್ನಾಟಕ ನಿಮ್ಮ ಜೊತೆ ಇದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಆರ್ ಸಿಬಿಗೆ ಶುಭವಾಗಲಿ. ಐ ಲವ್ ಯು. ನಾನು ನಾಳೆ ಇರುವುದಿಲ್ಲ. ಯುಎಸ್ ಗೆ ಹೋಗ್ತೀದಿನಿ. ಆದರೆ, ನನ್ನ ಹೃದಯ ಸದಾ ಆರ್ ಸಿಬಿ ಜೊತೆ ಇರುತ್ತೆ. ಈ ಸಲ್ ಕಪ್ ನಮ್ದೆ ಎಂದು ನಾನು ಹೇಳಲ್ಲ. ಅದನ್ನು ಮಾಡಿ ತೋರಿಸ್ತೀವಿ. ಆರ್ ಸಿಬಿ ರಾಕ್ ಎಂದು ನಟ ಶಿವರಾಜಕುಮಾರ್ ಹೇಳಿದ್ದಾರೆ. ಹೀಗೆ ಎಲ್ಲ ಕ್ಷೇತ್ರದ ದಿಗ್ಗಜರು ಆರ್ ಸಿಬಿಗೆ ಶುಭ ಕೋರಿದ್ದಾರೆ. ಎರಡೂ ತಂಡಗಳು ಇದುವರೆಗೂ ಕಪ್ ಗೆದ್ದಿಲ್ಲ. ಪಂಜಾಬ್ ಒಮ್ಮೆ ರನ್ನರ್ ಅಪ್ ಆಗಿದೆ. ಆರ್ ಸಿಬಿ 3 ಸಲ ರನ್ನರ್ ಅಪ್ ಆಗಿದೆ. ಹೀಗಾಗಿ ಯಾರೇ ಗೆದ್ದರೂ ದಾಖಲೆಯಾಗಲಿದೆ.