ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ(MUDA) ಅವ್ಯವಹಾರ ನಡೆದಿದೆ ಎಂದು ಬಿಜೆಪಿ, ಜೆಡಿಎಸ್ ನವರು ನಿಲುವಳಿ ಸೂಚನೆಯನ್ನು ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ತಂದಿದ್ದರು. ಚರ್ಚೆ ಮಾಡಿದರೆ ಕೆಟ್ಟ ಸಂಪ್ರದಾಯವಾಗುತ್ತೆ ಮತ್ತು ನಿಯಮಾವಳಿಗಳಿಗೆ ವಿರುದ್ಧವಾಗುತ್ತೆ ಎಂದು ವಿಧಾನಸಭಾಧ್ಯಕ್ಷರು, ಪರಿಷತ್ ಸಭಾಪತಿಗಳು ಚರ್ಚೆಗೆ ತೆಗೆದುಕೊಳ್ಳಲು ಆಗಲ್ಲ ಎಂದು ರೂಲಿಂಗ್ ನಲ್ಲೇ ಕೊಟ್ಟಿದ್ದಾರೆ. ಇದನ್ನು ಅವರು ತಿರಸ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ಬಿಜೆಪಿ ಹಾಗೂ ಜೆಡಿಎಸ್(BJP JDS) ನವರು ಆಧಾರ ರಹಿತವಾದದ್ದಂತಹ, ಕಾನೂನು ಬಾಹಿರವಾಗಿರುವಂತಹ ರೀತಿಯಲ್ಲಿ ಚರ್ಚೆಗೆ ನಿಲುವಳಿಗಳನ್ನು ತಂದಿದ್ದರು. ರಾಜಕೀಯ ಮಾಡಿಲಿಕ್ಕೆ ಇದನ್ನು ತಂದಿದ್ದರು. ಯಾವುದೇ ನಿಲುವಳಿ ಚರ್ಚೆಯಾಗಬೇಕಾದರೆ ನಿಯಮಗಳ ಅನುಸಾರ ಇರಬೇಕಾಗುತ್ತೆ. ವಿರುದ್ಧವಾಗಿದ್ದರೆ ಚರ್ಚೆ ಮಾಡಲು ಬರಲ್ಲ. ಹೀಗಾಗಿ ಸಭಾಧ್ಯಕ್ಷರು, ಸಭಾಪತಿಗಳು ಕಾನೂನು ರೀತಿ ಕ್ರಮ ತೆಗೆದುಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್ ನವರು ರಾಜಕೀಯವಾಗಿ ಹತಾಶರಾಗಿದ್ದಾರೆ. 135 ಪ್ಲಸ್ 1 ಸ್ಥಾನ ನಾವು ಗೆದ್ದ ಮೇಲೆ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ಕೊಡುತ್ತಾರೆ. ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿರುವುದು ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದು ಸಹಿಸಿಕೊಳ್ಳಲು ಆಗುತ್ತಿಲ್ಲ. ಎರಡು ವಾರ ಕರೆದ ಮುಂಗಾರು ಅಧಿವೇಶನದಲ್ಲಿ ವಾಲ್ಮೀಕಿ(Valmiki nigama) ನಿಗಮದಲ್ಲಿ ನಡೆದಂತಹ ಹಗರಣದ ಬಗ್ಗೆ ಮಾತ್ರ ಚರ್ಚೆ ಆಗಿದ್ದು ಬಿಟ್ಟರೆ ರಾಜ್ಯದ ಸಮಸ್ಯೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಪ್ರವಾಹ ಬಂದಿದ್ದರ ಬಗ್ಗೆ ನಮ್ಮ ಶಾಸಕರು ಪ್ರಸ್ತಾಪ ಮಾಡಿದರು. ವಿರೋಧ ಪಕ್ಷದವರು ಯಾರೂ ಮಾಡಲಿಲ್ಲ. ಬೇರೆ ವಿಚಾರಗಳ ಬಗ್ಗೆನೂ ಚರ್ಚೆಯಾಗಲಿಲ್ಲ. ಮುಖ್ಯಮಂತ್ರಿಗಳಿಗೆ, ರಾಜ್ಯ ಸರ್ಕಾರಕ್ಕೆ ಮಸಿ ಬಳಿಬೇಕು ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ.
ಶಾಸಕನಾಗಿ, ಸಚಿವನಾಗಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿದ್ದೀನಿ. ಇವತ್ತಿನವರೆಗೂ ನನ್ನ ಮೇಲೆ ಒಂದು ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಬಿಜೆಪಿ, ಜೆಡಿಎಸ್ ನವರು ದ್ವೇಷದಿಂದ ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಇವರು ಸೇರಿಕೊಂಡು ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಇದರಿಂದ ಹತಾಶರಾಗಿ ವಾಮವಾರ್ಗ ಹುಡುಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.