ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ ಸೋಂಪುರ ರಸ್ತೆಯಲ್ಲಿರುವ ಮರಯ್ಯ ಸಿದ್ದಯ್ಯ ಹಿರೇಮಠ ಲೇಔಟ್ ನಲ್ಲಿ ಅಮೃತ-2 ಯೋಜನೆಯ ಅಡಿಯಲ್ಲಿ 23.39 ಲಕ್ಷ ರೂಪಾಯಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಶಾಸಕ ಅಶೋಕ ಮನಗೂಳಿ ಗುರುವಾರ ಸಂಜೆ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಶಾಸಕನಾದ ಬಳಿಕ ನಗರದಲ್ಲಿರುವ ಪ್ರತಿಯೊಂದು ಉದ್ಯಾನವನ್ನು ಅಭಿವೃದ್ಧಿ ಪಡಿಸುವ ಮೂಲಕ ಹಿರಿಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಉಪಯೋಗವಾಗು ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ನಗರದಲ್ಲಿ ಸುಮಾರು 74 ರಿಂದ 80 ಉದ್ಯಾನವನಗಳಿವೆ. ಇದರಲ್ಲಿ 10 ರಿಂದ 15 ಉದ್ಯಾನವನಗಳು ಸುಸಜ್ಜಿತವಾಗಿವೆ. ನಾನು ನೂತನವಾಗಿ 15 ಉದ್ಯಾನವನಗಳನ್ನು ಮಂಜೂರು ಮಾಡಿಸಿ ಹಂತ ಹಂತಹಂತವಾಗಿ ಅಭಿವೃದ್ಧಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡ್ತಿದೀನಿ. ಅಮೃತ-2 ಯೋಜನೆ ರಾಜ್ಯದ ಎಲ್ಲ ಪುರಸಭೆಗಳಿಗೆ ಮಂಜೂರು ಆಗಿಲ್ಲ. ವಿಶೇಷವಾಗಿ 20-30 ಪುರಸಭೆಗಳಿಗೆ ಮಾತ್ರ ಮಂಜೂರು ಆಗಿವೆ. ಈ ಯೋಜನೆಯ 3.15 ಕೋಟಿ ರೂಪಾಯಿಯಲ್ಲಿ 75 ಲಕ್ಷ ರೂಪಾಯಿಲ್ಲಿ 3 ಉದ್ಯಾನವನಗಳ ಕಾಮಗಾರಿ ತೆಗೆದುಕೊಂಡಿವಿ. 2.40 ಕೋಟಿ ರೂಪಾಯಿಯಲ್ಲಿ ಕೆರೆ ಪಕ್ಕದಲ್ಲಿರುವ ಶಾಂತವೀರ ಮಹಾಸ್ವಾಮಿಗಳ ಹೆಸರಿನಲ್ಲಿರುವ ಉದ್ಯಾನವನ್ನು ಅಭಿವೃದ್ಧಿ ಪಡಿಸುವ ನಿರ್ಮಿಸುವ ನಿಟ್ಟಿನಲ್ಲಿ 90 ಲಕ್ಷ ರೂಪಾಯಿಯಲ್ಲಿ ಒಂದೂವರೆ ಕಿಲೋ ಮೀಟರ್ ತಡೆಗೋಡೆಯನ್ನು ನಿರ್ಮಾಣ ಮಾಡಬೇಕು ಅನ್ನೋ ಕಾಮಗಾರಿ ತೆಗೆದುಕೊಂಡಿವೆ. ಯಾಕಂದರೆ ಕೆರೆ ಸೋರಿಕೆಯಾಗಬಾರದು. ಇನ್ನು 50 ಲಕ್ಷ ರೂಪಾಯಿಯಲ್ಲಿ ಮಕ್ಕಳಿಗೆ ಆಟೋಪಕರಣ, 50 ಲಕ್ಷ ರೂಪಾಯಿಯಲ್ಲಿ ಉದ್ಯಾನವನ ಅಭಿವೃದ್ಧಿ ಅನುದಾನ ಮೀಸಲು ಇಡಲಾಗಿದೆ ಎಂದರು.
ವಿಜಯಪುರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಂದಗಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇನ್ನು ಸಿಂದಗಿ ಸಂಪೂರ್ಣವಾಗಿ ನೀರಾವರಿಯಾಗಿದೆ. ರೈತರು ನಿಂಬೆ, ದಾಕ್ಷಿ, ದಾಳಿಂಬೆ ಸೇರಿ ಹಲವು ಬೆಳೆಗಳನ್ನು ಬೆಳೆಯುತ್ತಾರೆ. ನಮ್ಮಲ್ಲಿ ಒಂದು ಕೋಲ್ಡ್ ಸ್ಟೋರೇಜ್ ಕೊಡಬೇಕು ಎಂದು ಎಪಿಎಂಸಿ ಸಚಿವರಾದ ಶಿವಾನಂದ ಪಾಟೀಲರ ಬಳಿಕ ಕೇಳಿದೆ. ಈಗ 6.65 ಕೋಟಿ ರೂಪಾಯಿಯ ಕೋಲ್ಡ್ ಸ್ಟೋರೇಜ್ ಮಂಜೂರು ಆಗಿದೆ ಎಂದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ, ಜಿಲ್ಲಾ ಕೆಡಿಪಿ ಸದಸ್ಯ ನೂರ್ ಅಹ್ಮದ್, ನಗರಸಭೆ ಜೆಇ ಅಜರ್ ನಾಟೀಕಾರ, ಗುತ್ತಿಗೆದಾರ ಶಿವು ಬಡಗೇರ ಸೇರಿದಂತೆ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.




