ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಚಾಮುಂಡಿ ಬೆಟ್ಟದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಪರಿಸರ ಹಾಳು ಮಾಡಲಾಗುತ್ತಿದೆ ಎಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಗಂಭೀರ ಆರೋಪ ಮಾಡಿದರು. ವಿವಿಧ ಸಂಘಟನೆಗಳೊಂದಿಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿ ಯಾವುದೇ ಹೊಸ ಮನೆಗಳನ್ನು ನಿರ್ಮಾಣ ಮಾಡದಂತೆ ಆದೇಶ ಇದ್ದರು ಕೂಡ ಚಾಮುಂಡಿ ಬೆಟ್ಟದ ನಿವಾಸಗಳು ಹಾಗೂ ಬೆಟ್ಟಕ್ಕೆ ಬಂದಿರುವ ವಲಸಿಗರು ಅಲ್ಲಿನ ಗ್ರಾಮ ಪಂಚಾಯಿತಿ ಜಾಗಗಳಲ್ಲಿ ಹಾಗೂ ಜಮೀನುಗಳಲ್ಲಿ ಮನೆಗಳನ್ನು ಕಟ್ಟಿ ಬೆಟ್ಟದ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಗಮನ ಹರಿಸಬೇಕಾದ ಆ ಭಾಗದ ಶಾಸಕರಾದ ಜಿ.ಟಿ ದೇವೇಗೌಡ ಅವರು ಮೌನವಾಗಿರುವುದು ದುರಂತದ ಸಂಗತಿ. ಗ್ರಾಮ ಪಂಚಾಯಿತಿ ಪಿಡಿಒ, ತಹಶೀಲ್ದಾರ್ ಹಾಗೂ ಅರಣ್ಯ ಅಧಿಕಾರಿಗಳು ಇದು ತಮ್ಮ ಕೆಲಸವಲ್ಲ ಎಂದು ಬೇಜವಾಬ್ದಾರಿಯಿಂದ ಕಣ್ಣು ಮುಚ್ಚಿ ಕುಳಿತಿದ್ದಾರೆ. ಈಗಾಗಲೇ ನಂದಿ ಹತ್ತಿರ ರಸ್ತೆ ಕುಸಿದು ಮೂರು ನಾಲ್ಕು ವರ್ಷಗಳು ಕಳೆದರೂ ಇನ್ನೂ ಸರಿಪಡಿಸಲಾಗಿಲ್ಲ. ಮುಂದಿನ ದಿನದಲ್ಲಿ ಮಡಕೇರಿ ರೀತಿಯಲ್ಲಿ ಚಾಮುಂಡಿ ಬೆಟ್ಟವೂ ಕೂಡ ಕುಸಿಯುವುದನ್ನು ನಾವು ನೋಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಟ್ಟದಲ್ಲಿ ಅಕ್ರಮವಾಗಿ ಮನೆ ಕಟ್ಟುವ ಮಾಲೀಕರುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವ ಮೂಲಕ ಎಇಇ ಕಾನೂನು ಉಲ್ಲಂಘಿಸುತ್ತಿದ್ದಾರೆ. ಇದರ ಬಗ್ಗೆ ಗಮನಹರಿಸಿ ಅಧಿಕಾರಿಗಳಿಗೆ ಹಾಗೂ ಅಲ್ಲಿನ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅನಧಿಕೃತವಾಗಿ ಕಟ್ಟಿರುವ ಹಾಗೂ ಕಟ್ಟುತ್ತಿರುವ ಮನೆಗಳನ್ನು ತೆರವುಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಯಾರೇ ಕಾಮಗಾರಿ ಮಾಡಲು ಮುಂದಾದರೆ ಅಂತಹ ಮನೆಗಳನ್ನು ಹಾಗೂ ಕಟ್ಟಡಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಕನ್ನಡ ಕ್ರಾಂತಿದಳ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ, ಕರ್ನಾಟಕ ಯುವ ಸೇನೆ ವೇದಿಕೆ, ಕರ್ನಾಟಕ ಪ್ರಜಾಶಕ್ತಿ ವೇದಿಕೆ ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮೈಸೂರು ಜಿಲ್ಲಾಧ್ಯಕ್ಷ ಜಗದೀಶ್, ಕರ್ನಾಟಕ ಯುವ ಸೇನೆ ವೇದಿಕೆ ರಾಜ್ಯಾಧ್ಯಕ್ಷ ಅರುಣ್, ಯುವ ಹೋರಾಟಗಾರ ನಾಗರಾಜ್ ಮದಕರಿ, ನವೀನ್, ಮಹಿಳಾ ಹೋರಾಟಗಾರ್ತಿ ಕಲಾಧನು ಉಪಸ್ಥಿತರಿದ್ದರು.




