ಪ್ರಜಾಸ್ತ್ರ ಸುದ್ದಿ
ಶುಕ್ರವಾರ ಸಂಜೆ ನಡೆದ ಆರ್ ಸಿಬಿ ಹಾಗೂ ಸಿಎಸ್ಕೆ ಪಂದ್ಯದಲ್ಲಿ ಆರ್ ಸಿಬಿ 50 ರನ್ ಗಳಿಂದ ಗೆಲುವು ಸಾಧಿಸಿದೆ. ಮೂಲಕ 2008ರ ಬಳಿಕ ಆರ್ ಸಿಬಿ ಚೆನ್ನೈ ತಂಡದ ತವರು ನೆಲದಲ್ಲಿ ಸೋಲಿಸುವ ಮೂಲಕ ಕಳೆದ 17 ವರ್ಷಗಳ ಗೆಲುವಿನ ಬರವನ್ನು ನೀಗಿಸಿಕೊಂಡಿದೆ. ಇದರ ನಡುವೆ ಸಿಎಸ್ಕೆ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಧೋನಿ 9ನೇ ಕ್ರಮಾಂಕದಲ್ಲಿ ಬಂದು ಆಡಿರುವುದು ಅನೇಕರಿಗೆ ಅಚ್ಚರಿಯಾಗಿದೆ. ಇದಕ್ಕಾಗಿ ಅವರ ಮೇಲೆ ಟೀಕಾಸ್ತ್ರ ಪ್ರಯೋಗಿಸಲಾಗುತ್ತಿದೆ.
197 ರನ್ ಗಳ ಗುರಿ ಬೆನ್ನು ಹತ್ತಿದ ಸಿಎಸ್ಕೆ ತಂಡದ ಆಟಗಾರರು ಬ್ಯಾಟಿಂಗ್ ನಲ್ಲಿ ಸಂಪೂರ್ಣ ವಿಫಲರಾದರು. ವಿಕೆಟ್ ಮೇಲೆ ವಿಕೆಟ್ ಬೀಳುತ್ತಿದ್ದರೂ ಧೋನಿ ಅಂಗಳಕ್ಕೆ ಬರಲೇ ಇಲ್ಲ. 7.1 ಓವರ್ ಗಳಲ್ಲಿ 117 ರನ್ ಬೇಕಿತ್ತು. 6 ವಿಕೆಟ್ ಬಿದ್ದಾಗಿತ್ತು. ಆಗ್ಲೂ ಬಂದವರು ಬೌಲರ್ ರವಿಚಂದ್ರನ್ ಅಶ್ವಿನ್. ಆದರೆ, 16ನೇ ಓವರ್ ನಲ್ಲಿ ಅಶ್ವಿನ್ ಔಟ್ ಆದ ಬಳಿಕ ಧೋನಿ 9ನೇ ಆಟಗಾರರನಾಗಿ ಕಣಕ್ಕೆ ಇಳಿದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಕೊನೆಯ ಓವರ್ ನಲ್ಲಿ 2 ಸಿಕ್ಸ್, 1 ಫೋರ್ ಗಳಿಸಿ 16 ಎಸೆತಗಳಲ್ಲಿ 30 ರನ್ ಗಳಿಸಿ ಅಜಯರಾಗಿ ಉಳಿದರು. ಆದರೆ, ಇದು ಧೋನಿ ಅಭಿಮಾನಿಗಳು ಸೇರಿದಂತೆ ಮಾಜಿ ಕ್ರಿಕೆಟರಗಳಿಗೂ ಇಷ್ಟವಾಗಿಲ್ಲ. 43ನೇ ವಯಸ್ಸಿನಲ್ಲಿ ರನ್ ಗಳಿಸುವ ಸಾಮರ್ಥ್ಯ ಇರುವ ಧೋನಿ ಮಧ್ಯಮ ಕ್ರಮಾಂಕದಲ್ಲಿ ಬಂದು ತಂಡಕ್ಕೆ ಆಸರೆಯಾಗುವ ಬದಲು ಕೊನೆಯಲ್ಲಿ ಬಂದಿದ್ದಕ್ಕೆ ಟೀಕೆಗಳು ಕೇಳಿ ಬರುತ್ತಿವೆ. ಮಧ್ಯಮ ಕ್ರಮಾಂಕದಲ್ಲಿ ಹೋಗಿ ಎಂದು ಧೋನಿಗೆ ಹೇಳಲು ಸಿಎಸ್ಕೆ ಆಡಳಿತ ಮಂಡಳಿ, ಕೋಚ್ ಬಳಗಕ್ಕೆ ಧೈರ್ಯವಿಲ್ಲ ಎಂದು ಕಿಡಿ ಕಾರಲಾಗಿದೆ.