ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengalodru): ನಾನು ವಿಧವೆಯರಿಗೆ ಗನ್ ಪಾಯಿಂಟ್ ಇಟ್ಟು ಆಸ್ತಿ ಬರೆಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಹಾಗಿದ್ದರೆ ಅವರನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಿ. ನಾನು ಯಾರಿಗೆ ಗನ್ ಪಾಯಿಂಟ್ ಇಟ್ಟಿದ್ದೇನೆ ಹೇಳಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar), ಕೇಂದ್ರ ಸಚಿವ ಹೆಚ್.ಡಿ(HDK) ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ನಪುಂಸಕ, ಗಂಡಸ್ಥನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ಹೇಳಿಕೆ ನಾನು ಗಮನಿಸಿಲ್ಲ. ಅವರೊಬ್ಬರೆ ಗಂಡಸು. ಹಿಂದೆ ಅವರು ಏನು ಮಾಡಿದ್ದಾರೆ ಒಮ್ಮೆ ನೋಡಿ. ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ. ನನ್ನ ವಿರುದ್ಧ ದಾಖಲೆಗಳನ್ನು ಬಿಚ್ಚಿಡಲಿ. ಅಲ್ಲಮ ವೀರಭದ್ರಪ್ಪ ಖರೀದಿಸಿದ್ದ ಆಸ್ತಿ ನನ್ನ ಮಗಳು ಖರೀದಿಸಿದ್ದಾಳೆ. ಇನ್ನು ಮಾರಾಟವಾಗಲು ಸಿದ್ಧವಿರುವ ಜಾಗಗಳಿದ್ದರೆ ಹೇಳಿ ಖರೀದಿಸುತ್ತೇನೆ ಎಂದು ಕುಟುಕಿದರು.
ಕಳೆದ ಎರಡ್ಮೂರು ವರ್ಷಗಳಿಂದ ಟೀಕೆಗಳನ್ನು ಸಹಿಸಿಕೊಂಡಿದ್ದೇನೆ. ಮಗನ ಸೋಲಿನ ನಂತರ ಅವರ ಮಾತು ಮಿತಿ ಮೀರಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ, ಪತ್ನಿ, ಸಹೋದರ, ತಂಗಿ ಮೇಲೆ ಅದಿರು ಕಳ್ಳತನದ ಸುಳ್ಳು ಎಫ್ಐಆರ್ ದಾಖಲಿಸಿದ್ದರು. ಅದನ್ನು ಮರೆತು ಅವರು ಸಿಎಂ ಆಗಲು ನೆರವಾಗಿದ್ದೆ. ನನ್ನ ಆಸ್ತಿ ಮಾಹಿತಿ ತೆರೆದ ಪುಸ್ತಕದಂತೆ. ಇನ್ನು ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ, ಕುಮಾರಸ್ವಾಮಿ, ಆರ್.ಅಶೋಕ್, ವಿಜಯೇಂದ್ರಗೆ ಭ್ರಮೆ ಎಂದು ವಾಗ್ದಾಳಿ ನಡೆಸಿದರು.