ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ವಿರುದ್ಧ ಸೊಸೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆ. ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಸ್.ನಾರಾಯಣ್, ಇವರ ಪತ್ನಿ ಹಾಗೂ ಪುತ್ರನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಮೂಲಕ ಚಂದನವನದಲ್ಲಿ ಮತ್ತೊಂದು ಕುಟುಂಬದ ವಿಚಾರ ಇದೀಗ ಬೀದಿಗೆ ಬಂದಿದೆ. ಇದಕ್ಕೂ ಮೊದಲು ನಟ ಅಜಯ್ ರಾವ್ ದಂಪತಿ, ಅದಕ್ಕೂ ಮೊದಲು ಕೆಲವು ನಟರ ಕುಟುಂಬದ ವಿಚಾರಗಳು ಬೆಳಕಿಗೆ ಬಂದಿವೆ.
ಎಸ್.ನಾರಾಯಣ್ ಪುತ್ರ ಪವನ್ ಹಾಗೂ ಪವಿತ್ರಾ ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ನೋಡಿದರೆ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ನಿರ್ದೇಶಕ ಎಸ್.ನಾರಾಯಣ, ನನ್ನ ತಂದೆ ವರದಕ್ಷಿಣೆ ವಿರುದ್ಧ ಹೋರಾಟಗಳನ್ನು ಮಾಡಿದವರು. ನಾನು ಅದನ್ನು ವಿರೋಧಿಸಿದವನು. ನನ್ನ ಸಿನಿಮಾಗಳ ಮೂಲಕ ಸಮಾಜದಲ್ಲಿ ಸಂದೇಶ ನೀಡಿದವನು. ವರದಕ್ಷಿಣೆ ಅನ್ನೋದು ನಮ್ಮ ಮನೆಯಲ್ಲಿಯೇ ಇಲ್ಲ. ಹೆಣ್ಮಕ್ಕಳಿಗೆ ಇದೊಂದು ಅಸ್ತ್ರವಾಗಿದೆ. ಸೊಸೆ ಮನೆಬಿಟ್ಟು ಹೋಗಿ 14 ತಿಂಗಳಾಗಿದೆ. ಆಗ ಇಲ್ಲದ್ದು ಈಗ ದೂರು ನೀಡಿದ್ದು ಹೇಗೆ ಎಂದಿದ್ದಾರೆ.