ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಇವತ್ತಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳೇ ಇಲ್ಲ. ಮೌಲ್ಯಯುತ ಶಿಕ್ಷಣ ಹಾಗೂ ಬದುಕು ರೂಪಿಸುವ ಶಿಕ್ಷಕರು ಕಣ್ಮರೆಯಾಗುತ್ತಿದ್ದಾರೆ. ಹೀಗಾಗಿ ಎಲ್ಲರೂ ಅಂಕಗಳ ಹಿಂದೆ ಬಿದ್ದು ಮಾರ್ಕ್ಸ್ ವಾದಿಗಳು ಆಗುತ್ತಿದ್ದಾರೆ ಎಂದು ಉಪನ್ಯಾಸಕ ಹಾಗೂ ಸಾಹಿತಿ ಮಂಜುನಾಥ ಜುನಗೊಂಡ ಹೇಳಿದರು. ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಯುವ ಬರಹಗಾರ, ಶಿಕ್ಷಕ ಅಶೋಕ ಬಿರಾದಾರ ಸಂಪಾದಕತ್ವದ ‘ಬದುಕು ಪ್ರೀತಿಸಿದ ಮೇಷ್ಟ್ರು’ ಪುಸ್ತಕ ಬಿಡುಗಡೆ ವೇಳೆ, ಕೃತಿಯ ಅವಲೋಕನದ ವೇಳೆ ಈ ರೀತಿ ಹೇಳಿದರು.
ಇವತ್ತು ಆದರ್ಶ ಶಿಕ್ಷಕ ಪ್ರಶಸ್ತಿ ಅನ್ನೋದು ವ್ಯಾಪಾರವಾಗಿದೆ. ಪ್ರಶಸ್ತಿ ಕೊಡಲೇಂದೆ ಹಲವು ಸಂಘಗಳು ಹುಟ್ಟಿಕೊಂಡಿವೆ. ಇನ್ನು ಹಣ ಕೊಟ್ಟು ಅಭಿನಂದನಾ ಗ್ರಂಥ ಬರೆಸಿಕೊಳ್ಳುವ ಪರಿಸ್ಥಿತಿಯಲ್ಲಿ ನಾವಿಂದು ಬಂದು ನಿಂತಿದ್ದು, ದಿ.ಶಿಕ್ಷಕ ಬಸಣ್ಣ ನಾಯ್ಕಲ್ ಅವರಂತವರು ಸಿಗುವುದು ವಿರಳ. ಅಥರ್ಗದಲ್ಲಿ ರೇವಣಸಿದ್ದ ಎನ್ನುವ ಶಿಕ್ಷಕನ ಗುಡಿ ಕಟ್ಟಿದ್ದು ಜಾತ್ರೆ ನಡೆಯುತ್ತದೆ. ಇಂತಹ ಮೌಲ್ಯಯುತ ಶಿಕ್ಷಕರು ಸಮಾಜಕ್ಕೆ ಬೇಕಿದೆ ಎಂದರು.
ಗ್ರಂಥ ಬಿಡುಗಡೆ ಮಾಡಿದ ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಭವಿಷ್ಯ ರೂಪಿಸುವ ಸಂಸ್ಕಾರ ಕಲಿಸಬೇಕು. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಗೆ ಪಾಲಕರು, ಸರ್ಕಾರ ಹಾಗೂ ಶಿಕ್ಷಕರು ಕಾರಣ ಎಂದು ವಿಷಾದ ವ್ಯಕ್ತಪಡಿಸಿದರು. ಅತಿಥಿ ಗುರುರಾಜ ದೇಸಾಯಿ ಮಾತನಾಡಿದರು. ಸಾನಿದ್ಯ ವಹಿಸಿದ್ದ ಬ್ಯಾಡಗಿಹಾಳದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಎಲ್ಲಿಯವರೆಗೆ ಶಿಕ್ಷಕರ ಕೈಯಲ್ಲಿ ಬಡಿಗೆ ಇರುತ್ತೋ ಅಲ್ಲಿಯವರೆಗೆ ನಿಮ್ಮ ಮಕ್ಕಳಿಗೆ ಪೊಲೀಸರು ಲಾಠಿ ತೋರಿಸುವುದಿಲ್ಲವೆಂದು ಹೇಳಿದರು. ಶಿಕ್ಷಕ ಬಸಣ್ಣ ನಾಯ್ಕಲ್ ಶಿಷ್ಯರಾದ ಎಸ್.ಬಿ ಸಜ್ಜನ, ಮಲ್ಲಿಕಾರ್ಜುನ ವಡ್ಡರ ಮಾತನಾಡಿದರು.
ಈ ವೇಳೆ ಪುಸ್ತಕಕ್ಕೆ ಸಹಾಯ, ಸಹಕಾರ ನೀಡಿದ ಬೂದಿಹಾಳ ಪಿ.ಟಿ ಗ್ರಾಮದ ಹಲವರನ್ನು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಮನಗೌಡ ಪಾಟೀಲ, ಸೋಮಶೇಖರ ಬುಳ್ಳಾ, ಗೊಲ್ಲಾಳಪ್ಪ ಮನಗೂಳಿ, ಕುಮಾರಗೌಡ ಬಿರಾದಾರ ಸೇರಿದಂತೆ ಇತರರು ವೇದಿಕೆ ಮೇಲಿದ್ದರು. ಶೋಭಾ ಅಶೋಕ ಬಿರಾದಾರ, ಶಿವರಾಜ ಮುರುಡಿ, ಬಲಭೀಮ ಮಾದರ, ಪ್ರಕಾಶ ಯಂಕಂಚಿ, ಮಲ್ಲಿಕಾರ್ಜುನ ನಾಯ್ಕಲ್, ಸಂತೋಷ ಕುಳಗೇರಿ, ಸಿದ್ದು ಬ್ಯಾಕೋಡ, ಗುರುನಾಥ ಅರಳಗುಂಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಪ್ರಕಾಶ ಮೂಡಲಗಿ ಪ್ರಾರ್ಥನಾ ಗೀತೆ ಹಾಡಿದರು. ಬದುಕು ಪ್ರೀತಿಸಿದ ಮೇಷ್ಟ್ರು ಪುಸ್ತಕದ ಸಂಪಾದಕ ಹಾಗೂ ಸದ್ಗುರು ಕೋಚಿಂಗ್ ಕ್ಲಾಸ್ ಮುಖ್ಯಸ್ಥ ಅಶೋಕ ಬಿರಾದಾರ ಸ್ವಾಗತ ಹಾಗೂ ಪ್ರಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಹಾಗೂ ಬರಹಗಾರ ನಾಗೇಶ ತಳವಾರ ನಿರೂಪಣೆ ಮಾಡಿದರು.