ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ಶಿವಶರಣ ಪೂಜಾರಿ ಎನ್ನುವ ರೈತರ ಹೊಲದಲ್ಲಿರುವ ಐಪಿ ಸೆಟ್ ಟಿಸಿ ಸುಟ್ಟು ಹೋದ ಪರಿಣಾಮ, ರೈತರು ಅದನ್ನು ಕೆಇಬಿಗೆ ತಂದು ನೀಡಿದ್ದಾರೆ. ಹೊಸದಾಗಿ ಟಿಸಿ ಕೊಡಿ ಎಂದು ಕಳೆದೊಂದು ವಾರಕ್ಕಿಂತ ಹೆಚ್ಚು ದಿನಗಳ ಕಾಲ ಸಿಂದಗಿಯಲ್ಲಿನ ಕೆಇಬಿ ಕಚೇರಿಗೆ ರೈತರು ಅಲೆದಾಡಿದ್ದಾರೆ. ಇವತ್ತು ಕೊಡುತ್ತೇವೆ. ನಾಳೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ರೈತರು ಶನಿವಾರ ಸಂಜೆ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಹೊಸದಾಗಿ ಟಿಸಿ ಕೊಡುವ ತನಕ ನಾವು ಇಲ್ಲಿಂದ ಹೋಗುವುದಿಲ್ಲ. ಅಹೋರಾತ್ರಿ ಧರಣಿ ಸಹ ಮಾಡಲು ಸಿದ್ಧವೆಂದು ಸಂಬಂಧಪಟ್ಟ ರೈತರು ಕೆಇಬಿ ಅಧಿಕಾರಿಗಳು, ಸಿಬ್ಬಂದಿಗೆ ಹೇಳಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿಯೂ ಒಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಜಾಸ್ತ್ರ ವೆಬ್ ಪತ್ರಿಕೆ ಜೊತೆಗೆ ಮಾತನಾಡಿದ ರೈತರು, ಕೆಇಬಿ ಕಚೇರಿಗೆ ಬಂದು ಹೋಗಿ ಸಾಕಾಗಿದೆ. ಇದೇ ರೀತಿಯಾದರೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದರು. ಕೊನೆಗೆ ಸಂಜೆ 7 ಗಂಟೆಯ ಬಳಿಕ ಟಿಸಿ ಕೊಟ್ಟಿದ್ದು ರೈತರು ತೆಗೆದುಕೊಂಡು ಹೋಗಿದ್ದಾರೆ.
‘ಟಿಸಿ ಸುಟ್ಟ ಸಂಬಂಧ ಕೆಇಬಿಗೆ ರೈತರು ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ಬಂದು ಹೋಗುತ್ತಿದ್ದರು. ಆದರೂ ಯಾರೂ ಸರಿಯಾಗಿ ಸ್ಪಂದಿಸಿಲ್ಲ. 100 ವ್ಯಾಟಿನ ಟಿಸಿ ವ್ಯಾಪ್ತಿಯಲ್ಲಿ ಸುಮಾರು 16 ರೈತರು ಬರುತ್ತಾರೆ. ಅವರ ದುಡಿಮೆ ಬಿಟ್ಟು ವಾರಗಟ್ಟಲ್ಲೇ ಕೈಯಿಂದ ಖರ್ಚು ಮಾಡಿಕೊಂಡು ಅಲೆದಾಟ ನಡೆಸಿದರೂ ಸ್ಪಂದಿಸಿಲ್ಲ. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ ಮೇಲೆ, ಟಿಸಿ ಕೊಟ್ಟಿದ್ದಾರೆ. ರೈತರಿಗೆ ಸರಿಯಾಗಿ ಸ್ಪಂದಿಸದಿದ್ದರೆ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮಾಡುತ್ತೇವೆ.’ – ಬಸನಗೌಡ ಧರ್ಮಗೊಂಡ, ಉತ್ತರ ವಲಯ ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಿಂದಗಿ ನಗರ ಘಟಕದ ಅಧ್ಯಕ್ಷ ಶಿವಪ್ಪ ಸುಲ್ಪಿ, ದೇವರನಾವದಗಿ ರೈತ ಮುಖಂಡ ಶರಣು ಕೂಡಿ, ಟಿಸಿ ವ್ಯಾಪ್ತಿಗೆ ಬರುವ ರೈತರಾದ ಶಿವಶರಣ ಪೂಜಾರಿ, ಹಣಮಂತ ಬಾಸಗಿ, ಶಂಕ್ರೆಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಅಣಸಿದ್ದಪ್ಪ ಪೂಜಾರಿ, ಶ್ರೀಶೈಲ ದೊಡಮನಿ, ಬಸಪ್ಪ ಪೂಜಾರಿ, ಶಿವಪುತ್ರಪ್ಪ ಬಾಸಗಿ, ರಾಜು ಬಾಗವಾನ, ಮೈಬುಸಾಬ ಮುಲ್ಲಾ ಉಪಸ್ಥಿತರಿದ್ದರು.