ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ರಾಜ್ಯದ 5ನೇ ಹಣಕಾಸು ಆಯೋಗದ(Finance Commission Team) ತಂಡವು ಸೋಮವಾರ ಮದಭಾವಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಗ್ರಾಮ ಪಂಚಾಯತಿಯ ಸದಸ್ಯರೊಂದಿಗೆ ಸಮಾಲೋಚನೆ ಸಭೆ ನಡೆಸಿತು. ಆಯೋಗದ ಅಧ್ಯಕ್ಷರಾದ ಡಾ.ಸಿ.ನಾರಾಯಣಸ್ವಾಮಿ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳ ಕುರಿತ ಸಾರ್ವಜನಿಕರ ಅಭಿಪ್ರಾಯ-ಸಲಹೆಗಳನ್ನು ಪಡೆದುಕೊಂಡು, ಆರ್ಥಿಕ ಸ್ಥಿತಿ-ಗತಿಗಳ ಕುರಿತಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು. ಸರಕಾರವು ಹಣಕಾಸು ಇಲಾಖೆಯಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ದಿಗಾಗಿ ಅನುದಾನ ಒದಗಿಸಲಾಗಿದೆ. ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳಿಗಾಗಿ ಬಿಡುಗಡೆಯಾದ ಬಜೆಟ್ ವೆಚ್ಚ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಒದಗಬಹುದಾದ ಅಗತ್ಯ ಹಣದ ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದರು.
ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆರೊಂದಿಗೆ ಚರ್ಚೆ: ಆಯೋಗದ ತಂಡವು ಸ್ವಸಹಾಯ ಸಂಘದ ಮಹಿಳೆಯರೊಂದಿಗೆ ಚರ್ಚೆ ನಡೆಸಿ, ಮಹಿಳೆಯರು ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ನಡೆಸಲು ಅವರನ್ನು ಪ್ರೋತ್ಸಾಹಿಸಲು ಅವರ ನೆರವಿಗಾಗಿ ಸರಕಾರಕ್ಕೆ ಶಿಪಾರಸ್ಸು ಮಾಡಲಾಗುವುದೆಂದು ಹೇಳಿದರು. ತಂಡ ಗ್ರಾಮ ಪಂಚಾಯಿತಿ ಆಡಳಿತ, ಆರ್ಥಿಕ ಸ್ಥಿರತೆ, ವಿವಿಧ ಯೋಜನೆಯ ಕಾಮಗಾರಿಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದರು. ಹಾಗೂ ಗ್ರಾಮ ಪಂಚಾಯಿತಯ ಗ್ರಂಥಾಲಯ, ಕೂಸಿನ ಮನೆ, ಆಡಳಿತ ಕಛೇರಿ ವೀಕ್ಷಿಸಿದರು.
ಈ ಸಂದರ್ಭ ರಾಜ್ಯದ 5ನೇ ಹಣಕಾಸು ಆಯೋಗದ ಸದಸ್ಯರುಗಳಾದ ಮಹಮದ್ ಸನಾವುಲ್ಲಾ, ಆರ್.ಎಸ್. ಫೋಂಡೆ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಗವ್ವ ಮಾದರ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ, ಆಯೋಗದ ಸಮಾಲೋಚಕರಾದ ಎಂ.ಕೆಂಪೇಗೌಡ ಹಾಗೂ ಸಿ.ಜಿ. ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಕೆ.ಯಾಲಕ್ಕಿಗೌಡ, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ರಾಠೋಡ ಜಿ.ಪಂ. ಜಿ.ಪಂನ ಸಹಾಯಕ ಯೋಜನಾಧಿಕಾರಿಗಳಾದ ಎ.ಬಿ ಅಲ್ಲಾಪೂರ. ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಧಾಕರ್ ಮದಭಾವಿ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್.ಆರ್.ಕಟ್ಟಿ ಹಾಗೂ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು ಗ್ರಾಮಸ್ಥರು ಇದ್ದರು.