ಪ್ರಜಾಸ್ತ್ರ ಸುದ್ದಿ
ಕೂಡ್ಲಿಗಿ(Kudligi): ಬಾಲಕಿ ಸೇರಿದಂತೆ ಐದಾರು ಜನರ ಮೇಲೆ ಬೀದಿನಾಯಿ ದಾಳಿ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಕೊಡ್ಲಿಗಿ ಪಟ್ಟಣದ ವಾರ್ಡ್ ನಂಬರ್ 1ರ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಡೆದಿದೆ. ಮೂರು ವರ್ಷದ ಬಾಲಕಿ ಸೇರಿದಂತೆ ಐದಾರು ಮಂದಿಯ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಇದರಿಂದಾಗಿ ನಾಗರೀಕರು ತೀವ್ರ ಆತಂಕದಲ್ಲಿದ್ದಾರೆ. ಶ್ರೀನಿವಾಸ ಎಂಬುವವರ ಮೊಮ್ಮಗಳು ಶ್ರೀನಿಧಿ ಮನೆಯ ಅಂಗಳದಲ್ಲಿ ಆಟವಾಡುತ್ತಿರುವ ಸಂದರ್ಭದಲ್ಲಿ, ಬೀದಿ ನಾಯಿ ಏಕಾಏಕಿ ಎರಗಿ ಎಳೆದಾಡಿದೆ. ಬಾಲಕಿಯ ಸೊಂಟದ ಭಾಗ ಸೇರಿದಂತೆ ಹಲವು ಕಡೆ ಗಾಯಗಳಾಗಿವೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ.
ಇದೆ ನಾಯಿಯು ಇದಕ್ಕೂ ಮೊದಲು, ಅದೇ ಏರಿಯಾದಲ್ಲಿನ ನಾಲ್ಕು ಜನರಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೂಡಲೇ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು, ದಾಳಿ ಮಾಡಿರುವ ನಾಯಿಯನ್ನು ಸೆರೆ ಹಿಡಿಸಬೇಕು. ಆ ನಾಯಿಯ ಆರೋಗ್ಯ ಸ್ಥಿತಿಗತಿ ಅರಿಯಬೇಕಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಅದನ್ನು ಬೇರೆಡೆಗೆ ನಿರ್ಜನ ಪ್ರದೇಶಕ್ಕೆ ಸಾಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪಟ್ಟಣದ ಹಲವೆಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಅವುಗಳನ್ನು ಕೂಡಲೇ ಸೆರೆಹಿಡಿದು ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ




