ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ(Devara Hipparagi): ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಪ್ರಮುಖ ದೇಶಮುಖ ಅವರ ಮನೆ ಆವರಣದಲ್ಲಿ ಮಹಾ ದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಮಹಾತ್ಮೆ ಪುರಾಣದಲ್ಲಿ ಸೋಮವಾರ ಶರಣಬಸವೇಶ್ವರ ಮತ್ತು ಮಹದೇವಿ ಅಮ್ಮನವರ ಅದ್ದೂರಿ ಮದುವೆ ಸಮಾರಂಭವು ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಜರುಗಿತು. ಪುರಾಣದಲ್ಲಿ ಜರುಗಿದ ಮದುವೆಯ ವಧು ಮಾಶ್ಯಾಳ ಗ್ರಾಮದ ಮಹಾದೇವಿಯ ಕಡೆಯವರಾಗಿ ಶರಣ ದಂಪತಿಗಳಾದ ರಾಮನಗೌಡ ಬಾಪುಗೌಡ ಕರ್ನಾಳ ದಂಪತಿಗಳು ವಹಿಸಿಕೊಂಡರೆ, ವರನ ಕಡೆಯವರಾಗಿ ರಮೇಶ ಶರಣಪ್ಪ ಹಿಪ್ಪರಗಿ(ಪಡಶೆಟ್ಟಿ) ದಂಪತಿಗಳು ಮುಂದೆ ನಿಂತು ಮದುವೆ ಕಾರ್ಯಗಳನ್ನು ನಡೆಸಿಕೊಟ್ಟರು.
ನಾನಾ ಕಾರ್ಯಕ್ರಮಗಳ ಜೊತೆ ವಧುವಿನ ಮನೆಗೆ ತೆರಳಿ ವಧುವಿನ ಜತೆಗೆ ಬೀಗರನ್ನು ಮದುವೆ ಮಂಟಪಕ್ಕೆ ಕರೆತರಲಾಯಿತು. ವೀಳ್ಯೆ ಹಂಚುವ ಮೂಲಕ ಬೀಗ, ಬೀಗರು ಪರಸ್ಪರ ಸಿಹಿ ಹಂಚಿಕೊಂಡರು. ಮದುವೆಗೆ ಆಗಮಿಸಿದ ಮಹಿಳೆಯರು ಮದುವೆಯ ಪದಗಳನ್ನು ಹಾಡುವ ಮೂಲಕ ಉಡಿತುಂಬುವ ಕಾರ್ಯಕ್ರಮ ಜರುಗಿತು. ನಂತರ ವಧು ವರರಿಗೆ ಸುರಿಗೆ ಸುತ್ತಿ ಎಣ್ಣಿ ಅರಿಶಿಣ ಹಚ್ಚಿ ನೀರೆರೆಯುವ ಮೂಲಕ ಹಸೆ ಮಣೆಗೆ ಕರೆತಂದು ಆರತಕ್ಷತೆ ನೆರವೇರಿಸಲಾಯಿತು. ಗ್ರಾಮಸ್ಥರಿಂದ ನೈಜ ಮದುವೆಯ ಹಾಗೆ ಬಾಂಡೆ ಸಾಮಾನು ಆಹೇರಿ ಅದ್ದೂರಿಯಾಗಿ ನಡೆಯಿತು.

ಶರಣಬಸವೇಶ್ವರ ಮದುವೆ ಸಮಾರಂಭದ ಪೂಜಾ ವಿಧಾನಗಳನ್ನು ಶಾಂತಯ್ಯ ಹಿರೇಮಠ ಮತ್ತು ರುದ್ರಯ್ಯ ಹಿರೇಮಠ ಸ್ವಾಮಿಗಳು ನಡೆಸಿಕೊಟ್ಟರು. ಪುರಾಣದ ಶಾಸ್ತ್ರಿಗಳು ಮಂತ್ರೋಪದೇಶಗಳನ್ನು ನಡೆಸಿದರು. ಸಡಗರ ಸಂಭ್ರಮದ ಶರಣಬಸವೇಶ್ವರರ ಮದುವೆ ಮಾಶ್ಯಾಳದ ಮಹಾದೇವಿ ಜೊತೆ ನೆರವೇರಿತು. ನಂತರ ಪುರಾಣ ಆಲಿಸಲು ಬಂದ ನೂರಾರು ಭಕ್ತರು ಶಿರಾ, ಅನ್ನ ಸಾಂಬಾರ ಊಟದ ಪ್ರಸಾದವನ್ನು ಸವಿದು ಶ್ರೀಶರಣಬಸವೇಶ್ವರರ ಕೃಪೆಗೆ ಪಾತ್ರರಾದರು. ಅಷ್ಟೊತ್ತಿಗಾಗಲೇ ರಾತ್ರಿ ಹನ್ನೊಂದು ಗಂಟೆ ದಾಟಿತ್ತು. ಮದುವೆಯ ಮಾತುಗಳನ್ನು ಮೆಲುಕು ಹಾಕುತ್ತಾ ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ವಂದಾಲದ ವೇ.ಮೂ ಪಂಡಿತ್ ಮಹಾಂತಯ್ಯ ಶಾಸ್ತ್ರಿಗಳು ಪುರಾಣ ಪಠಿಸಿದರು, ಜೇರಟಗಿಯ ವೇ.ಮೂ ಶಿವಯ್ಯಸ್ವಾಮಿ ಗವಾಯಿಗಳು ಮದುವೆಯ ಹಾಡುಗಳನ್ನು ಪ್ರಸ್ತುತಪಡಿಸಿದರು. ಮುದನೂರದ ಸೋಮಶೇಖರ(ವಿಶ್ವಕರ್ಮ) ತಬಲಾ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರುಗಳಾದ ನಾನಾ ಗೌಡ ಕರ್ನಾಳ, ಶರಣಗೌಡ ಕೋಟಿಖಾನಿ, ಶರಣಪ್ಪ ಹಿಪ್ಪರಗಿ(ಪಡಶೆಟ್ಟಿ), ಅಪ್ಪ ಸಾಹೇಬ ದೇವರಗುಡಿ, ಶಂಕ್ರಪ್ಪ ಬಂಗಾರಗುಂಡ, ಗೋಲ್ಲಾಳಪ್ಪ ಪಟ್ಟಣಶೆಟ್ಟಿ, ಶಾಂತಗೌಡ ಕೋಟಿಖಾನಿ, ಗುತ್ತಪ್ಪಗೌಡ ಕೋಟಿಖಾನಿ, ಹುಸೇನ ನಾಗಾವಿ, ಗುಂಡಪ್ಪ ಹಿಪ್ಪರಗಿ, ಮಹಾಂತಯ್ಯ ಹಿರೇಮಠ, ಪ್ರಭುಗೌಡ ದೇವರಗುಡಿ, ಸಲಬಣ್ಣ ಬಡಿಗೇರ, ಕಾಸಪ್ಪ ತಳವಾರ, ಈರಣ್ಣ ಬಡಿಗೇರ, ಶಶಿ ಪತ್ತಾರ ಸೇರಿದಂತೆ ಗ್ರಾಮದ ಎಲ್ಲ ಸಮುದಾಯದ ಮುಖಂಡರು, ಮಹಿಳೆಯರು ಹಾಗೂ ಯುವಕರು ಭಾಗವಹಿಸಿದರು.




