ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ದೇವಸ್ಥಾನಗಳ ಪೂಜಾರಿಗಳನ್ನು ಟಾರ್ಗೆಟ್ ಮಾಡಿ ಅವರನ್ನು ನಂಬಿಸಿ ಬಳಿಕ ಅವರ ಪತ್ನಿಯರ ಚಿನ್ನಾಭರಣ ಎಗರಿಸುತ್ತಿದ್ದ ಐನಾತಿ ಕಳ್ಳನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ ಭಟ್ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 15 ಲಕ್ಷ ರೂಪಾಯಿ ಮೌಲ್ಯದ 116 ಗ್ರಾಂ ಚಿನ್ನಾಭರಣ, 409 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಉದ್ಯಮಿ ವೇಷದಲ್ಲಿ ದೇವಸ್ಥಾನಗಳಿಗೆ ಹೋಗುತ್ತಿದ್ದ ಈತ ಅಲ್ಲಿಂದ ಅರ್ಚಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಆಗಾಗ ದೇವಸ್ಥಾನಕ್ಕೆ ಬಂದು ಸಾವಿರಾರು ರೂಪಾಯಿ ದಕ್ಷಿಣೆ ಕೊಡುತ್ತಿದ್ದ. ಬಳಿಕ ನಮ್ಮ ಹೊಸ ಅಂಗಡಿ ಉದ್ಘಾಟನೆಯಿದೆ. ವಿಶೇಷ ಪೂಜೆಗೆ ಮುತ್ತೈದೆಯರು ಬೇಕು. ನಿಮ್ಮ ಮನೆಯವರನ್ನು ಕಳಿಸಿ ಎಂದು ಹೇಳುತ್ತಿದ್ದ. ಇವನ ಮಾತು ನಂಬಿ ಅವರು ಪೂಜೆಗೆ ಕಳಿಸುತ್ತಿದ್ದರು.
ಮಹಿಳೆಯರನ್ನು ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ನೀವು ಹೋಗುವ ಜಾಗದಲ್ಲಿ ಒಡವೆಗಳನ್ನು ಹಾಕಿಕೊಳ್ಳಬೇಡಿ. ನನ್ನ ಹತ್ತಿರ ಕೊಡಿ. ನಂತರ ವಾಪಸ್ ಕೊಡುತ್ತೇನೆ ಎಂದು ಪುಸಲಾಯಿಸಿ ಪಡೆಯುತ್ತಿದ್ದ. ಬಳಿಕ ಅವರನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ಪರಾರಿಯಾಗುತ್ತಿದ್ದ. ಹೀಗೆ ಐದಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಹೆಬ್ಬಾಳ, ಸಿಟಿ ಮಾರ್ಕೆಟ್, ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ, ರಾಜಾಜಿನಗರ, ರಾಮಮೂರ್ತಿನಗರದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿವೆ.




