ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಡಾ(MUDA) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಹೈಕೋರ್ಟ್ ಮುಂದೂಡಿದೆ. ಎಂ.ನಾಗಪ್ರಸನ್ನ ಅವರನ್ನೊಳಗೊಂಡ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿ, ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತೆ ಸ್ವಲ್ಪ ನಿರಾಳತೆಯಾಗಿದೆ.
ಸಿಎಂ ಪರ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದರು. ರಾಜ್ಯಪಾಲ(Governor) ಥಾವರ್ ಚಂದ್ ಗೆಹ್ಲೋಟ್ ಪರ ತುಷಾರ್ ಮೆಹ್ತಾ ಹಾಗೂ ದೂರುದಾರ ಸ್ನೇಹಮಹಿ ಕೃಷ್ಣ ಪರ ವಕೀಲ ಕೆ.ಜಿ ರಾಘವನ್ ವಾದ ಮಂಡಿಸಿದರು. ಮುಡಾ ಪ್ರಕರಣದ ತನಿಖೆಗಾಗಿ ಸರ್ಕಾರವೇ ಆಯೋಗ ರಚಿಸಿದೆ. ಆದ್ದರಿಂದ ರಾಜ್ಯಪಾಲರು 17ಎ ಅಡಿಯಲ್ಲಿ ಅನುಮತಿ ನೀಡಿದ್ದಾರೆ. ಸತ್ಯ ತಿಳಿಯಲು ಅವಕಾಶ ನೀಡಬೇಕು ಎಂದು ವಕೀಲ ರಾಘವನ್ ವಾದ ಮಂಡಿಸಿದರು.
ಅಡ್ವೂಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ. ಹಬ್ಬದ(Festival) ವಾರಂತ್ಯ ರಜೆಗಳಿದ್ದು, ಒಂದು ವಾರ ಕಾಲಾವಕಾಶ ಕೇಳಿದರು. ಹಬ್ಬಕ್ಕೂ ಮೊದಲೇ ವಾದ ಮಂಡಿಸಿ ಎಂದು ಹೈಕೋರ್ಟ್ ಹೇಳಿತು. ನಾನು ಅಡ್ವೊಕೆಟ್ ಜನರಲ್ ಅವರ ವಾದ ಮಂಡಿಸಿದ ಬಳಿಕ ವಾದಿಸುತ್ತೇನೆ. ಸೆಪ್ಟೆಂಬರ್ 9 ಅಥವ 21ರಂದು ವಾದಿಸುತ್ತೇನೆ ಎಂದು ಸಿಎಂ ಪರ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಹೇಳಿದರು. ಅಷ್ಟು ದೂರದ ದಿನಾಂಕ ಕೊಡಲು ಆಗಲ್ಲವೆಂದು ಹೇಳಿ ಸೆಪ್ಟೆಂಬರ್ 9 ನೀಡಿದೆ. ಸೆಪ್ಟೆಂಬರ್ 12ಕ್ಕೆ ಸಂಪೂರ್ಣ ವಿಚಾರಣೆ ಮುಗಿಸೋಣ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಹೇಳಿದರು.