ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ಸ್ಯಾಂಡಲ್ ವುಡ್ ವರನಟ ದಿ.ಡಾ.ರಾಜಕುಮಾರ್ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ತಾಳವಾಡಿ ಠಾಣೆ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು. ಮದ್ರಾಸ್ ಹೈಕೋರ್ಟ್ ಇದನ್ನು ವಜಾಗೊಳಿಸಿದೆ. ಗೋಪಿಚೆಟ್ಟಿಪಾಳ್ಯಂ 3ನೇ ಸೆಷನ್ಸ್ ಕೋರ್ಟ್ 9 ಜನರನ್ನು2018 ಸೆಪ್ಟೆಂಬರ್ 25ರಂದು ಖುಲಾಸೆಗೊಳಿಸಿತ್ತು.
26 ವರ್ಷಗಳ ಹಿಂದೆ ರಾಜಕುಮಾರ್ ಅವರನ್ನು ಈರೋಡ್ ಜಿಲ್ಲೆಯ ತಾಳವಾಡಿ ಹತ್ತಿರದ ತೋಟದ ಮನೆಯಲ್ಲಿ ವಾಸವಾಗಿದ್ದ ವೇಳೆ ವೀರಪ್ಪನ್ ಹಾಗೂ ಆತನ ಸಹಚರರು ಅಪಹರಿಸಿ 108 ದಿನಗಳ ಕಾಲ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಈ ಸಂಬಂಧ ಮಾರನ್, ಸೆಲ್ವನ್, ಪುಟ್ಟುಸ್ವಾಮಿ, ಮಲ್ಲು, ಪಸುವಣ್ಣ, ಕಲ್ಮಂಡಿ ರಾಮನ್, ನಾಗರಾಜ್, ಗೋವಿಂದರಾಜ್, ರಮೇಶ್, ಸೇತುಕುಲಿ ಗೋವಿಂದನ್, ಆಂಡ್ರಿಲ್, ಅಮೃತಲಿಂಗಂ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮುಂದೆ ಪೊಲೀಸ್ ಕಾರ್ಯಾಚರಣೆ ವೇಳೆ ವೀರಪ್ಪನ್, ಸೇತುಕುಳಿ ಗೋವಿಂದನ್, ಚಂದ್ರಗೌಡ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದರು. ಆರೋಪಿ ಮಲ್ಲು ವಿಚಾರಣೆ ವೇಳೆ ಮೃತಪಟ್ಟಿದ್ದ. ರಮೇಶ್ ಎಂಬಾತ ತಲೆ ಮರೆಸಿಕೊಂಡಿದ್ದ. ಇದೀಗ ನ್ಯಾಯಮೂರ್ತಿಗಳಾದ ಎಂ.ಜ್ಯೋತಿರಾಮನ್, ಪಿ.ವೇಲುಮುರಗನ್ ಅವರಿದ್ಧ ಪೀಠ ವಿಚಾರಣೆ ನಡೆಸಿ 9 ಜನರ ಖುಲಾಸೆಯನ್ನು ಎತ್ತಿ ಹಿಡಿದಿದೆ.




