ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಧರ್ಮಸ್ಥಳದ ವಿಚಾರಕ್ಕೆ ಸಂಬಧಂಸಿದಂತೆ ಮಾಹಿತಿ ನೀಡುವಂತೆ ವಿಪಕ್ಷಗಳು ಸೋಮವಾರ ಸದನದಲ್ಲಿ ಪಟ್ಟು ಹಿಡಿದವು. ಇದಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಉತ್ತರ ನೀಡಿದ್ದು, ಅನಾಮಿಕ ವ್ಯಕ್ತಿ ತೋರಿಸಿದ ಜಾಗಗಳಲ್ಲಿ ಅಗೆಯಲಾಗಿದೆ. ಆದರೆ, ಎಲ್ಲ ಕಡೆ ತೋರಿಸಿದರೆ ಅಗೆಯುವುದಿಲ್ಲ. ಈಗ ಉತ್ಖನನ ಸ್ಥಗಿತವಾಗಿದೆ. ಇದನ್ನು ಎಸ್ಐಟಿ ಅವರು ನಿರ್ಧರಿಸಿದ್ದಾರೆ. ತನಿಖೆ ಇನ್ನೂ ಆರಂಭವಾಗಿಲ್ಲ ಎಂದರು.
25 ವರ್ಷಗಳಿಂದ ಧರ್ಮಸ್ಥಳದಲ್ಲಿ ಮಹಿಳೆಯರು ಕಾಣೆಯಾಗಿರುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರು ಪತ್ರ ಬರೆದಿದ್ದರು. ಜುಲೈ 19ರಂದು ಎಸ್ಐಟಿ ರಚನೆಯಾಗಿದೆ. ಅನಾಮಿಕ ವ್ಯಕ್ತಿಯಿಂದ ಎಸ್ಐಟಿಯವರು 161 ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಆತ ಹೇಳಿದ ಜಾಗವನ್ನು ಗುರುತಿಸಲಾಗಿತ್ತು. ಎರಡು ಕಡೆ ಮಾನವನ ಅಸ್ಥಿಪಂಜರ, ಮೂಳೆ, ಬುರುಡೆ ಪತ್ತೆಯಾಗಿವೆ. ಅವುಗಳನ್ನು ಎಫ್ಎಸ್ಎಲ್ ಗೆ ಕಳಿಸಲಾಗಿದೆ.
ಎಫ್ಎಸ್ಎಲ್ ವರದಿಗಳು, ಮಣ್ಣಿನ ಪರೀಕ್ಷಾ ವರದಿಗಳು, ವಿಶ್ಲೇಷಣಾ ವರದಿಗಳು ಬಂದ ಬಳಿಕ ತನಿಖೆ ನಡೆಸಲಾಗುತ್ತೆ. ಯಾರ ಒತ್ತಡಕ್ಕೆ ಮಣಿಯದ ರೀತಿಯಲ್ಲಿ ತುಂಬಾ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ. ಸತ್ಯ ಹೊರಗೆ ತರುತ್ತೇವೆ. ಷಡ್ಯಂತ್ರ ಇದ್ರೆ ಆಚೆ ಬರುತ್ತೆ. ಸುಳ್ಳು ಇದ್ರೆ ಆಚೆ ಬರುತ್ತೆ. ಆತ ತಪ್ಪು ಒಪ್ಪಿಕೊಂಡಿದ್ದಾನೆ ಅನ್ನೋ ಸುದ್ದಿ ಹರಿದಾಡುತ್ತಿರುವುದು ಸುಳ್ಳು ಎಂದು ಸ್ಪಷ್ಟಪಡಿಸಿದರು.