ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಜಂಟಿ ಅಧಿವೇಶನದ ಎರಡನೇ ದಿನವಾದ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರ್ಕಾರ ಸಿದ್ಧಪಡಿಸಿದ ಭಾಷಣದ ಬದಲು ತಾವೇ ಸಿದ್ಧಪಡಿಸಿಕೊಂಡು ಬಂದ ಒಂದು ನಿಮಿಷದ ಭಾಷಣ ಮಾಡಿ ಸದನದಿಂದ ಹೊರ ನಡೆದರು. ಈ ಮೂಲಕ ಸರ್ಕಾರದೊಂದಿಗಿನ ಸಂಘರ್ಷ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಘೇರಾವ್ ಹಾಕಲು ಯತ್ನಿಸಿದರು. ಹೀಗಾಗಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ನಂತರ ಬಿಗಿ ಭದ್ರತೆಯಲ್ಲಿ ಅವರನ್ನು ಸದನದಿಂದ ಹೊರಗೆ ಕರೆತರಲಾಯಿತು.
ರಾಜ್ಯಪಾಲರ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಈ ಸಂಬಂಧ ಸುಪ್ರೀಂ ಕೋರ್ಟ್ ಗೆ ಹೋಗುವ ಬಗ್ಗೆ ಸಚಿವ ಸಂಪುಟದೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಸರ್ಕಾರ ಸಿದ್ಧಪಡಿಸಿದ್ದ 28 ಪುಟಗಳ ಭಾಷಣವನ್ನು ಸದನದಲ್ಲಿ ಮಂಡಿಸಿ ಶಾಸಕರಿಗೆ ವಿತರಿಸಿದರು. ನೆರೆಯ ತಮಿಳುನಾಡಿನಲ್ಲಿಯೂ ಸಹ ಸತತ ಮೂರನೇ ಬಾರಿಗೆ ರಾಜ್ಯಪಾಲರು ಭಾಷಣ ಮಾಡದೆ ಹೋಗಿದ್ದಾರೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.




