ಪ್ರಜಾಸ್ತ್ರ ಸುದ್ದಿ
ಲಖನೌ(Lucknow): ಐಪಿಎಲ್-2025 ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿತು. ನಾಯಕ ಜಿತೇಶ್ ಶರ್ಮಾ, ಮಯಾಂಕ್ ಅಗರ್ವಾಲ್ ಜೋಡಿಯ ಅಬ್ಬರದ ಬ್ಯಾಟಿಂಗ್ ನಿಂದಾಗಿ 10 ಬೌಲ್ ಗಳು ಬಾಕಿ ಇರುವಾಗಲೇ 228 ರನ್ ಗಳ ಗುರಿಯನ್ನು ಮುಟ್ಟಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಬಂದು 8 ವರ್ಷಗಳ ಬಳಿಕ ಮೊದಲನೇ ಕ್ವಾಲಿಫೈಯರ್ ಗೆ ಅವಕಾಶ ಪಡೆಯಿತು.
ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಎಲ್ಎಸ್ ಜಿ ನಾಯಕ ರಿಷಬ್ ಪಂಥ್ ಆರ್ಭಟಿಸಿದರು. 8 ಸಿಕ್ಸ್, 11 ಫೋರ್ ಗಳೊಂದಿಗೆ 61 ಬೌಲ್ ಗಳಲ್ಲಿ ಅಜೇಯ 118 ರನ್ ಗಳಿಸಿದರು. ಮಿಚಲ್ ಮಾರ್ಸ್ ಸಹ ಬ್ಯಾಟ್ ಬೀಸಿ 5 ಸಿಕ್ಸ್, 4 ಫೋರ್ ಗಳೊಂದಿಗೆ 37 ಬೌಲ್ ಗಳಲ್ಲಿ 67 ರನ್ ಗಳಿಸಿದರು. ಹೀಗಾಗಿ ಲಖನೌ ತಂಡ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಕಲೆ ಹಾಕಿತು. ಆರ್ ಸಿಬಿ ಪರ ತುಷಾರ್, ಭುವನೇಶ್ವರ್ ಕುಮಾರ್, ರೊಮರಿಯೊ ಶಫರ್ಡ್ ತಲಾ 1 ವಿಕೆಟ್ ಪಡೆದರು.
ಬಿಗ್ ಸ್ಕೋರ್ ಚೇಸ್ ಮಾಡಿದ ಆರ್ ಸಿಬಿ ಉತ್ತಮ ಆರಂಭ ಪಡೆಯಿತು. 5 ಓವರ್ ಗಳಲ್ಲಿ 60 ರನ್ ಗಳನ್ನು ದಾಟಿತು. ಕೊಹ್ಲಿ 54, ಸಾಲ್ಟ್ 30 ರನ್ ಗಳಿಸಿ ಒಳ್ಳೆಯ ಪಾಯ ಹಾಕಿದರು. ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ನಾಯಕ ರಜತ್ ಪಟೀದಾರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದು 14 ರನ್ ಮಾತ್ರ ಗಳಿಸಿದರು. ಲಿವಿಂಗಸ್ಟನ್ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ಮುಂದೆ ಜೊತೆಯಾದ ನಾಯಕ ಜಿತೇಶ್ ಶರ್ಮಾ, ಕನ್ನಡಿಗ ಮಯಾಂಕ್ ಅಗರ್ವಾಲ್ ಜೋಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ನಾಯಕ ಜಿತೇಶ್ ಶರ್ಮಾ 6 ಸಿಕ್ಸ್, 8 ಫೋರ್ ಗಳೊಂದಿಗೆ 33 ಬೌಲ್ ಗಳಲ್ಲಿ ಅಜೇಯ 85 ರನ್ ಗಳಿಸಿದರು. ಮಯಾಂಕ್ 23 ಬೌಲ್ ಗಳಲ್ಲಿ ಅಜೇಯ 41 ರನ್ ಗಳಿಸಿದರು. ಹೀಗಾಗಿ 18.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 230 ರನ್ ಗಳಿಸಿತು. ಇದರೊಂದಿಗೆ ಆರ್ ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಎಲ್ಎಸ್ ಜಿ ಕಳಪೆ ಫೀಲ್ಡಿಂಗ್, ದಿಗ್ವೇಶ್ ರಾಠಿಯ ಬೇಡದ ಹುಚ್ಚಾಟಗಳಿಂದ ಬೆಲೆ ತೆರಬೇಕಾಯಿತು. ಗುರುವಾರ ಟಾಪ್ ನಲ್ಲಿರುವ ಪಂಜಾಬ್ ಹಾಗೂ ಆರ್ ಸಿಬಿ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ.