ಪ್ರಜಾಸ್ತ್ರ ಸುದ್ದಿ
ಧಾರವಾಡ(Dharwad): ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆಯನ್ನು(Life Imprisonment) ಜಿಲ್ಲಾ ಕೋರ್ಟ್ ನೀಡಿದೆ. ಇದೀಗ ಧಾರವಾಡ ಹೈಕೋರ್ಟ್ ಪೀಠ ಮೊದಲ ಅಪರಾಧಿ ಹೊರತುಪಡಿಸಿ ಉಳಿದ 97 ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ. ಮಂಜುನಾಥ್ ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ. ಇವನನ್ನು ಬಿಟ್ಟು ಉಳಿದವರಿಗೆ ಜಾಮೀನು ಸಿಕ್ಕಿದೆ. 50 ಸಾವಿರ ರೂಪಾಯಿ, ಒಬ್ಬರ ಶೂರಿಟಿ ಮೇಲೆ ಜಾಮೀನು ನೀಡಿದೆ.
2014ರಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿ(Marakumbi) ಗ್ರಾಮದಲ್ಲಿ ಕ್ಷೌರದಂಗಡಿ ಹಾಗೂ ಹೋಟೆಲ್ ಗೆ ದಲಿತರಿಗೆ ಪ್ರವೇಶ ನೀಡದ ಕುರಿತು ಗಲಾಟೆ ನಡೆದಿದೆ. ಇದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದರು. ಅದೆ ದಿನ ರಾತ್ರಿ ಸಿನಿಮಾ ನೋಡಲು ಹೋದಾಗ ಸರ್ವಣಿಯರ ಹುಡುಗರ ಮೇಲೆ ದಲಿತ ಹುಡುಗರು ಹಲ್ಲೆ ಮಾಡಿದ್ದಾರಂತೆ. ಇದು ಮುಂದುವರೆದು ದಲಿತರ ಕೇರಿಗೆ ಸರ್ವಣಿಯರು ನುಗ್ಗಿ ಗಲಾಟೆ ಮಾಡಿ, ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಆಗಿಲ್ಲ.
ಈ ಸಂಬಂಧ 117 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಕೆಲವರು ಮೃತಪಟ್ಟಿದ್ದಾರೆ. ಮತ್ತೆ ಕೆಲವರ ಹೆಸರು ಪುನಾರಾರ್ವತನೆಯಾಗಿದೆ. 101 ಆರೋಪಿಗಳ ವಿರುದ್ಧ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ಅಕ್ಟೋಬರ್ 28, 2024ರಲ್ಲಿ ಕೊಪ್ಪಳ ಜಿಲ್ಲಾ ಕೋರ್ಟ್ ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ. ಇದು ಇತಿಹಾಸದಲ್ಲಿಯೇ ದೊಡ್ಡ ತೀರ್ಪು ಆಗಿದೆ.