ಪ್ರಜಾಸ್ತ್ರ ಸುದ್ದಿ
ವಯನಾಡು(Wayanad): ಕೇರಳದ(Kerala) ವಾಯನಾಡು ಜಿಲ್ಲೆಯ ಮೆಪ್ಪಡಿಯಲ್ಲಿ ಮಂಗಳವಾರ ಮುಂಜಾನೆ ಗುಡ್ಡ(Landslide) ಕುಸಿತವಾಗಿದೆ. ಇದರಿಂದಾಗಿ ನೂರಾರು ಜನರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ 19 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ದೊಡ್ಡ ಮಟ್ಟದಲ್ಲಿ ಮಣ್ಣು ಕುಸಿತಗೊಂಡಿದೆ. ಎನ್ ಡಿಆರ್(NDRF) ಎಫ್ ಸೇರಿದಂತೆ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೂ ತೊಂದರೆಯಾಗುತ್ತಿದೆ.
ಮಲಪ್ಪುರಂನ ನಿಲಂಬೂರ್ ಪ್ರದೇಶದಲ್ಲಿ ಹರಿಯುವ ಚಾಲಿಯಾರ್ ನದಿಯಲ್ಲಿ ಹಲವಾರು ಜನರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮುಂಡಕೈನಲ್ಲಿ ಹಲವು ಮನೆಗಳು, ಅಂಗಡಿಗಳು ಮಣ್ಣಿನಡಿಯಲ್ಲಿ ಹೂತು ಹೋಗಿವೆ ಎಂದು ತಿಳಿದು ಬಂದಿದೆ. ಸೇತುವೆಯೊಂದು ಸಹ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣಿರಾಯನ್ ಹೇಳಿದ್ದಾರೆ.
ಇನ್ನು ಘಟನೆ ಸಂಬಂಧ ಪ್ರಧಾನಿ ಮೋದಿ(Modi) ಹಾಗೂ ಲೋಕಸಭಾ ವಿಪಕ್ಷ ನಾಯಕ, ವಾಯನಾಡು ಮಾಜಿ ಸಂಸದ ರಾಹುಲ್ ಗಾಂಧಿ(Rahul Gandhi) ಸಹ ಕಳವಳ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರೊಂದಿಗೆ ಎಲ್ಲ ರೀತಿಯ ನೆರವಿನೊಂದಿಗೆ ಇರುವುದಾಗಿ ಹೇಳಿದ್ದಾರೆ. ಪ್ರಾಣ ಕಳೆದುಕೊಂಡವರಿಗೆ ಸಂತಾಪಗಳನ್ನು ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರಯನ್ನು ಪ್ರಧಾನಿ ಅವರು ಪಿಎಂಎನ್ ಆರ್ ಎಫ್(PMNRF) ಫಂಡನಿಂದ ಘೋಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದಿದ್ದಾರೆ.