ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಘೋಷಿಸಿತು. ಅದನ್ನು ನಂಬಿ ಜನರು ಅವರನ್ನು ಗೆಲ್ಲಿಸಿದರು. ಕಳೆದ ಎರಡು ವರ್ಷಗಳಿಂದ ಆಡಳಿತದಲ್ಲಿ ಸರ್ಕಾರ ತಾನು ಘೋಷಣೆ ಮಾಡಿದ ಗ್ಯಾರಂಟಿಗಳನ್ನು ನೀಡುವಲ್ಲಿ ಇದೀಗ ವಿಳಂಬವಾಗುತ್ತಿದೆ. ಆರಂಭದಲ್ಲಿ ಸರಿಯಾಗಿ ನಡೆಯುತ್ತಿತ್ತು. ಬರುಬರುತ್ತಾ ವ್ಯತ್ಯಾಸಗಳನ್ನು ಕಂಡು ಬರುತ್ತಿವೆ. ಕಳೆದ ಸುಮಾರು 3 ತಿಂಗಳಿಂದ ಗೃಹಲಕ್ಷ್ಮಿ ಹಣ, ಅನ್ನಭಾಗ್ಯ ಹಣ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್, ತಿಂಗಳ ತಿಂಗಳ ಹಣ ಹಾಕುವುದಕ್ಕೆ ಇದೇನು ಸಂಬಳನಾ.. ಹಾಕುತ್ತಾರೆ ಬಿಡಿ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.
ಸಚಿವ ಕೆ.ಜೆ ಜಾರ್ಜ್ ಹೇಳಿಕೆಯಿಂದ ಜನರು ಆಕ್ರೋಶಗೊಂಡಿದ್ದಾರೆ. ನಮ್ಮ ಸರ್ಕಾರ ಬಡವರ ಪರ, ಮಧ್ಯಮ ವರ್ಗದವರ ಪರ. ಈ ತರಹದ ಗ್ಯಾರಂಟಿ ಯೋಜನೆಗಳನ್ನು ಯಾರಿಂದಲೂ ಜಾರಿಗೆ ತರಲು ಆಗಿಲ್ಲವೆಂದು ಹೇಳುತ್ತಾ, ಪ್ರತಿ ಸರ್ಕಾರಿ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಪ್ರಚಾರ ಕೊಡಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಯೋಜನೆಗಳು ಕುಂಟುತ್ತಿವೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳು ಒಂದಲ್ಲ ಒಂದು ಕಾರಣಕ್ಕೆ ಸಮಸ್ಯೆಯಾಗುತ್ತಿವೆ. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣವೊಂದು ಸರಿಯಾಗಿ ಹೊರಟಿದೆ. ಉಳಿದ ನಾಲ್ಕು ಯೋಜನೆಗಳು ಮಾತ್ರ ಸರಿಯಾಗಿ ಸಾಗದೆ ಇರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಸಹದ್ಯೋಗಿಗಳು, ಕಾಂಗ್ರೆಸ್ ಶಾಸಕರು ಒಪ್ಪಿಕೊಳ್ಳಬೇಕು.