ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಈ ಯೋಜನೆ ಅನುಷ್ಠಾನ ಮುಂದೂಡದೆ ಬರುವ ಎರಡ್ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಜಲಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲ ನಿಗಮದ ಸಹಯೋಗದಲ್ಲಿ ಭಾನುವಾರ ಆಲಮಟ್ಟಿಯಲ್ಲಿ ನಿರ್ಮಾಣವಾದ ಜಲ ಮನೋರಂಜನಾ ಉದ್ಯಾನವನ ಉದ್ಘಾಟಿಸಿ ಅವರು ಮಾತನಾಡಿದರು. ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್ ವರೆಗೆ ಎತ್ತರಿಸಲು ಸರ್ಕಾರ ಬದ್ಧವಾಗಿದೆ. ಜಲಾಶಯವನ್ನು ಎತ್ತರಿಸುವುದರಿಂದ 75 ಸಾವಿರ ಎಕರೆ ಭೂಮಿ ಮುಳುಗಡೆಯಾಗುತ್ತದೆ. 20 ಹಳ್ಳಿಗಳು ಸ್ಥಳಾಂತರಗೊಳ್ಳುತ್ತವೆ. ಈ ಬೃಹತ್ ಯೋಜನೆ ಅನುಷ್ಠಾನಕ್ಕೆ ದೊಡ್ಡ ಪ್ರಮಾಣದ ಅನುದಾನ ಬೇಕಾಗುತ್ತದೆ. ಇದನ್ನು ಅವಳಿ ಜಿಲ್ಲೆಯ ಜನಪ್ರತಿನಿಧಿಗಳೆಲ್ಲ ಸೇರಿ ಸಚಿವ ಸಂಪುಟದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ಜಲಾಶಯದ ಎತ್ತರ ಹೆಚ್ಚಿಸಲಿಕ್ಕೆ ಪ್ರಥಮ ಆದ್ಯತೆ ನೀಡುವ ಮೂಲಕ ನಮ್ಮ ಪಾಲಿನ ಶೇಕಡ 90ರಷ್ಟು ನೀರನ್ನು ನಮ್ಮ ರೈತರಿಗೆ ಒದಗಿಸಲಾಗುವುದು ಎಂದರು. ಇದಕ್ಕೆ ಕೇವಲ 3 ವರ್ಷಗಳ ಗಡುವಿನಲ್ಲಿ ಈ ಭಾಗದ ಭೂಮಿ ಹಾಗೂ ಕಾಲುವೆಗೆ ನೀರು ಪೂರೈಸಲಿಕ್ಕೆ ನಾವೆಲ್ಲ ಐತಿಹಾಸಿಕ ನಿರ್ಣಯ ಕೈಗೊಂಡಿರುವುದಾಗಿ, ಆಲಮಟ್ಟಿ ಅಣೆಕಟ್ಟು ರಾಜ್ಯದಲ್ಲೇ ದೊಡ್ಡ ಜಲಾಶಯ. ಈ ಜಲಾಶಯದ ಎತ್ತರ ಹೆಚ್ಚಿಸಿದರೆ, ಈಗಿರುವ 130 ಟಿಎಂಸಿ ಬದಲಿಗೆ 233 ಟಿಎಂಸಿ ನೀರು ಸಂಗ್ರಹಿಸುವುದರೊಂದಿಗೆ ರಾಜ್ಯದಲ್ಲಿ ಅತೀ ದೊಡ್ಡ ಜಲಾಶಯ ನಮ್ಮದಾಗಲಿದೆ. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರು 2 ಲಕ್ಷ ಹೆಕ್ಟೇರ್ ಭೂಮಿ ಕಳೆದುಕೊಂಡಿದ್ದಾರೆ. ಬ್ರಿಜೇಶ್ ಕುಮಾರ ತೀರ್ಪನಿನ್ವಯ 6 ಲಕ್ಷ ಹೆಕ್ಟೇರ್ ನೀರಾವರಿಯಾಗಲು ಸಾಧ್ಯವಾಗುತ್ತದೆ ಎಂದ ಅವರು, 90 ಟಿಎಂಸಿಯಷ್ಟು ನೀರು ಬರುವ ಮೂಲಕ 6 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಯಾಗಲು ಸಾಧ್ಯವಿದೆ ಎಂದರು.




