Ad imageAd image

ಸಿಂದಗಿ: ಪುರಸಭೆ ತುರ್ತು ಸಭೆಗೆ ಬಹುತೇಕ ಸದಸ್ಯರ ಗೈರು

Nagesh Talawar
ಸಿಂದಗಿ: ಪುರಸಭೆ ತುರ್ತು ಸಭೆಗೆ ಬಹುತೇಕ ಸದಸ್ಯರ ಗೈರು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪುರಸಭೆ ತುರ್ತು ಸಾಮಾನ್ಯ ಸಭೆ ಸೋಮವಾರ ನಡೆಯಿತು. ಆದರೆ, ಬಹುತೇಕ ಸದಸ್ಯರು ಗೈರಾಗಿದ್ದು, ಚರ್ಚೆಗೆ ಇಟ್ಟುಕೊಂಡಿದ್ದ ಸ್ಥಾಯಿ ಸಮಿತಿ ರಚನೆ ಮಾಡುವ ವಿಚಾರವನ್ನು ಮುಂದಿನ ಸಭೆಗೆ ಮುಂದೂಡಲಾಯಿತು. ಬೆರಳೆಣಿಕೆ ಸದಸ್ಯರು, ನಾಮನಿರ್ದೇಶನಗೊಂಡ ಸದಸ್ಯರು ಭಾಗವಹಿಸಿದ್ದರು. ಪುರಸಭೆಯಲ್ಲಿನ ಅವ್ಯವಸ್ಥೆ ವಿರುದ್ಧ ಸದಸ್ಯರು ಮುಖ್ಯಾಧಿಕಾರಿ ರಾಜಶೇಖರ.ಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂತೆ ಕರವಸೂಲಿ ಬಗ್ಗೆ ಸಿಬ್ಬಂದಿ ಸರಿಯಾದ ಮಾಹಿತಿ ಕೊಡದೆ ಇರುವ ಬಗ್ಗೆ ಸದಸ್ಯ ಬಸವರಾಜ ಯರನಾಳ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಸಾಲಿನಲ್ಲಿ 25 ಲಕ್ಷ ರೂಪಾಯಿ ಆಗಿದೆ ಎಂದು ಸದಸ್ಯ ಹೇಳಿದರೆ, ಸಿಬ್ಬಂದಿ 21 ಲಕ್ಷ ರೂಪಾಯಿ ಎಂದು ಹೇಳಿದರು. ಈ ಬಗ್ಗೆ ನನಗೆ ಮಾಹಿತಿ ಎಂದು ಸದಸ್ಯ ಬಸವರಾಜ ಯರನಾಳ ಹೇಳಿದರು. ಇನ್ನು 2020ರಿಂದ ಇಲ್ಲಿಯವರೆಗೆ ಹೊಸ ಲೇಔಟ್ ಗಳಿಗೆ ಎಷ್ಟೊಂದು ತೆರಿಗೆ ಕಟ್ಟಿಸಿಕೊಳ್ಳಲಾಗಿದೆ ಅನ್ನೋದರ ಬಗ್ಗೆ ಮಾಹಿತಿ ನೀಡಬೇಕು ಎಂದು ಮುಖ್ಯಾಧಿಕಾರಿಯವರಿಗೆ ಕೇಳಿದರು.

ಇನ್ನು ರಾಜೀವ್ ಗಾಂಧಿ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ಕಳೆದ ಐದಾರು ತಿಂಗಳಿನಿಂದ ಯಾವುದೇ ಕೆಲಸವಾಗುತ್ತಿಲ್ಲ. ಫಲಾನುಭವಿಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಸಾಯಬಣ್ಣ ಪುರದಾಳ ಪ್ರಶ್ನಿಸಿದರು. ಸಿಬ್ಬಂದಿ ಕೊರತೆಯಿದ್ದು, ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೆಚ್ಚುವರಿ ಜವಾಬ್ದಾರಿ ತೆಗೆದುಕೊಳ್ಳಲು ಈಗಿರುವ ಸಿಬ್ಬಂದಿ ಒಪ್ಪುತ್ತಿಲ್ಲವೆಂದು ಮುಖ್ಯಾಧಿಕಾರಿ ರಾಜಶೇಖರ.ಎಸ್ ಅಸಹಾಯಕತೆ ತೋರಿಸಿದರು. ರಸ್ತೆ ಸಮಸ್ಯೆ, ಚರಂಡಿ ಸೇರಿದಂತೆ ಪಟ್ಟಣದ ತುಂಬಾ ಉಂಟಾಗಿರುವ ತೊಂದರೆಗಳ ಬಗ್ಗೆ ಗಮನ ಹರಿಸಬೇಕು. ಆದರೆ, ಮುಖ್ಯಾಧಿಕಾರಿಗಳು, ಸಿಬ್ಬಂದಿ ಫೋನ್ ಸ್ವಿಚ್ಛ್ ಆಫ್ ಇಟ್ಟುಕೊಂಡು ಇರುತ್ತಾರೆ. ಕೂಡಲೇ ತುರ್ತು ಕೆಲಸಗಳನ್ನು ಮಾಡಬೇಕು ಎಂದು ಸದಸ್ಯ ಹಣಮಂತ ಸುಣಗಾರ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಸದಸ್ಯರು ಸಹ ತಮ್ಮ ವಾರ್ಡ್ ನಲ್ಲಿನ ಸಮಸ್ಯೆಗಳ ಬಗ್ಗೆ ಹೇಳಿದರು. ಕಳೆದ ಐದು ವರ್ಷಗಳಲ್ಲಿ ಬರಿ ಸಭೆಗೆ ಬಂದು ಹೋಗುವುದು ಆಗಿದೆ. ನಮ್ಮ ವಾರ್ಡ್ ಗಳಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಜನರು ನಮಗೆ ಬೈಯುತ್ತಿದ್ದಾರೆ ಎಂದು 2ನೇ ವಾರ್ಡ್ ಸದಸ್ಯೆ ಉಮಾದೇವಿ ಸುಲ್ಫಿ, 15ನೇ ವಾರ್ಡ್ ಸದಸ್ಯೆ ಭಾಗಮ್ಮ ಡೋಣೂರ ಅಸಮಾಧಾನ ವ್ಯಕ್ತಪಡಿಸಿದರು. ಹೀಗೆ ಸದಸ್ಯರು ತುರ್ತು ಆಗಬೇಕಿರುವ ಕೆಲಸಗಳ ಬಗ್ಗೆ ಹೇಳಿದರೆ, ಮುಖ್ಯಾಧಿಕಾರಿಗಳು ಪುರಸಭೆಗೆ ಬರಬೇಕಿರುವ 2.50 ಕೋಟಿ ರೂಪಾಯಿ ಅನುದಾನವೇ ಬಂದಿಲ್ಲ. ಸಿಬ್ಬಂದಿಯ ಸಂಬಳದ ಸಮಸ್ಯೆಯಿದೆ. ನಾನು ಖರ್ಚು ಕಡಿಮೆ ಮಾಡಲು ಕಾರು ತೆಗೆದುಕೊಂಡು ಬರುವುದನ್ನು ಸಹ ಬಿಟ್ಟಿದ್ದೇನೆ ಎಂದು ಹೇಳುವ ಮೂಲಕ ಪುರಸಭೆಯಲ್ಲಿ ಅನುದಾನವೇ ಇಲ್ಲವೆಂದು ಪರೋಕ್ಷವಾಗಿ ಹೇಳಿದರು.

ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಉಪಾಧ್ಯಕ್ಷ ಸಂದೀಪ ಚೌರ, ಸದಸ್ಯರಾದ ಬಾಷಾಸಾಬ್ ತಾಂಬೋಳಿ, ಹಾಸೀಂ ಆಳಂದ, ಗೊಲ್ಲಾಳ ಬಂಕಲಗಿ, ಪರಶುರಾಮ ಕಾಂಬಳೆ ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಹಾಜರಿದ್ದರು.

WhatsApp Group Join Now
Telegram Group Join Now
Share This Article