ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಆರ್ ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದ ದುರಂತಕ್ಕೆ ಸಂಬಂಧಿಸಿದಂತೆ ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಪೊಲೀಸ್ ಇಲಾಖೆ ವಿಜಯೋತ್ಸವ ಬೇಡ ಎಂದು ಹೇಳಿದರೂ ಕೇಳದೆ ಸೊಕ್ಕಿನಿಂದ ಕಾರ್ಯಕ್ರಮ ಮಾಡಿ ಅಮಾಯಕರನ್ನು ಬಲಿ ಪಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಕ್ಷಮೆ ಕೇಳಬೇಕು ಎಂದಿದ್ದಾರೆ.
ಕ್ರಿಕೆಟ್ ಆಟಗಾರರು ಕೋಟಿ ಕೋಟಿ ಗಳಿಸುತ್ತಾರೆ. ಐಪಿಎಲ್ ವ್ಯವಹಾರಿಕ ಆಟ. ಸೂಕ್ತ ಭದ್ರತೆ, ಯೋಜನೆ ಇಲ್ಲಿದ ಪರಿಣಾಮ ಕಾಲ್ತುಳಿತವಾಗಿ 11 ಜನರು ಮೃತಪಟ್ಟಿದ್ದಾರೆ. ಇದರ ಹೊಣೆಯನ್ನು ಸರ್ಕಾರ ಹೊರುವ ಬದಲು ಪೊಲೀಸ್ ಅಧಿಕಾರಿಗಳ ಮೇಲೆ ಹಾಕಿದೆ. ಕೂಡಲೇ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು. ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.