ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ(Bagalakote): ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧ ಸ್ವಾಮೀಜಿಗಳಲ್ಲಿ ಜಿಲ್ಲೆಯ ಸೀಮಿಕೇರೆಯ ಲಡ್ಡು ಮುತ್ಯಾ(Laddu Mutya) ಕೂಡ ಒಬ್ಬರು. ಅದಾಗಲೇ ಅವರು ಲಿಂಗೈಕ್ಯರಾಗಿದ್ದಾರೆ. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಲಡ್ಡು ಮುತ್ಯಾನ ಅವತಾರ, ಸಂಚಾರಿ ದೇವರು ಅಂತೆಲ್ಲ ಹೇಳಿ ವಿಡಿಯೋ ವೈರಲ್ ಆಗುತ್ತಿದೆ. ತಿರುಗುತ್ತಿರುವ ಫ್ಯಾನ್(Fan) ನಿಲ್ಲಿಸಿ ಧೂಳಿನಿಂದ ವಿಭೂತಿ ರೀತಿ ಭಕ್ತರಿಗೆ ಹಚ್ಚುವ ದೃಶ್ಯ ವೈರಲ್ ಆಗಿದೆ. ಅಲ್ಲದೇ ರೀಲ್ಸ್ ಮಾಡಿ ಕುಣಿಯಲಾಗುತ್ತಿದೆ. ಇದರಿಂದ ಆಕ್ರೋಶಗೊಂಡಿರುವ ಮೂಲ ಮಠದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.
ನಕಲಿ(Fake) ಲಡ್ಡು ಮುತ್ಯಾಗೂ ಬಾಗಲಕೋಟೆ ಜಿಲ್ಲೆಯ ಸೀಮೆಕೇರೆಯ ಲಡ್ಡು ಮುತ್ಯಾಗೂ ಯಾವುದೇ ಸಂಬಂಧವಿಲ್ಲ. ಈ ಮಠ ಯಾವುದೇ ಶಾಖಾಮಠಗಳನ್ನು ಹೊಂದಿಲ್ಲ. ಇಲ್ಲಿ ಯಾವುದೇ ಮಠಗಳ ಸ್ವಾಮೀಜಿಗಳನ್ನು ನೇಮಕ ಮಾಡಿಲ್ಲ. ಲಡ್ಡು ಮುತ್ಯಾನ ಗದ್ದುಗೆ ಇದೆ. ಮೂರ್ತಿ ಸಹ ಇದೆ. ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ. ಹುಣ್ಣಿಮೆ, ಅಮವಾಸ್ಯೆ ದಿನ ಪ್ರಸಾದವಿರುತ್ತದೆ. ಹೀಗಾಗಿ ನಕಲಿ ಲಡ್ಡು ಮುತ್ಯಾಗೂ ಮೂಲ ಮಠಕ್ಕೂ ಸಂಬಂಧವಿಲ್ಲ. ರೀಲ್ಸ್ ಮಾಡಿ ಇವರಿಗೆ ಅವಮಾನ ಮಾಡಬೇಡಿ ಹಾಗೂ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.