ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ವಿಜಯಪುರ ಜಿಲ್ಲೆಯ ವಿಜಯಪುರ, ಇಂಡಿ ಮತ್ತು ಬಸವನಬಾಗೇವಾಡಿ ತಾಲೂಕಿನ 702 ಜನವಸತಿಗಳ ಹಾಗೂ 5 ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ (DBOT Scheme-I) ಹಾಗೂ ಜಿಲ್ಲೆಯ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕಿನ 343 ಜನವಸತಿಗಳ ಹಾಗೂ 6 ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ (DBOT Scheme-II) ವ್ಯಾಪ್ತಿಯಡಿ ಬರುವ ಪೈಪಲೈನ್ ಅಳವಡಿಸುವ ಕಾಮಗಾರಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು ಅತ್ಯಂತ ಅವಶ್ಯಕವಾಗಿರುವುದರಿಂದ ಪೈಪಲೈನ್ ಕಾಮಗಾರಿಯನ್ನು ಭೂಮಿಯ ಆಳದಲ್ಲಿ ಅಳವಡಿಸಲಾಗುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಅವಶ್ಯಕತೆ ಇರುವುದಿಲ್ಲ. ಆದರೆ ಕೆಲವರು ತಕರಾರು ಮಾಡಿ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತಿದ್ದರಿಂದ, ಈ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಗ್ರಾಮೀಣ ಜನವಸತಿಗಳಿಗೆ ನೀರು ಪೂರೈಸುವ ಹಿತದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರಿಂದ ಕಾಮಗಾರಿಗಳಿಗೆ ಅಡ್ಡಿಯಾಗದಂತೆ ನೋಡಿಕೊಂಡು ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ.
ಈ ಯೋಜನೆಯು ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಸ್ಥಳೀಯ ಸಮುದಾಯಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪ್ರಯೋಜನಕಾರಿಯಾಗಿರುವುದರಿಂದ ವಿಳಂಬ ಅಥವಾ ಹಸ್ತಕ್ಷೇಪವಿಲ್ಲದೆ ಕೆಲಸ ಮುಂದುವರಿಯುದು ನಿರ್ಣಾಯಕವಾಗಿದೆ. ಯಾವುದೇ ಸ್ಥಳದಲ್ಲಿ ಯಾವುದೇ ವ್ಯಕ್ತಿ ಅಡ್ಡಿಪಡಿಸುವುದು ಅಥವಾ ನಿಲ್ಲಿಸುವುದು, ಯಾರಿಗಾದರೂ ಕೆಲಸ ಮಾಡುವರಿಗೆ ಅಡೆತಡೆ ಮಾಡುವುದು, ಕೈಯಿಂದ ಹೊಡೆದು ಗಾಯ ಮಾಡುವುದು, ಬಡಿಗೆ ಅಥವಾ ಇತರೆ ವಸ್ತುಗಳಿಂದ ಹೊಡೆಯುವುದು, ಕೆಲಸ ಮಾಡುವವರಿಗೆ ಅವಾಚ್ಯವಾಗಿ ಬೈಯುವುದು, ಕೆಲಸ ಮಾಡುವವರಿಗೆ ಜೀವ ಬೆದರಿಕೆ ಹಾಕುವುದು ಕಂಡು ಬಂದಲ್ಲಿ ಬಿಎನ್ಎಸ್ ಕಲಂ 132 ರನ್ವಯ ಎರಡು ವರ್ಷ ಕಾರಾವಾಸ ಅಥವಾ ದಂಡ, ಬಿಎನ್ಎಸ್ 126(1) ರನ್ವಯ ಒಂದು ತಿಂಗಳು ಶಿಕ್ಷೆ ಅಥವಾ ಐದು ಸಾವಿರ ರೂಪಾಯಿ ದಂಡ, ಬಿಎನ್ಎಸ್ ಕಲಂ 115 (2) ರನ್ವಯ ಒಂದು ವರ್ಷ ಕಾರಾವಾಸ ಅಥವಾ ಹತ್ತು ಸಾವಿರ ರೂಪಾಯಿ ದಂಡ ಬಿಎನ್ಎಸ್ ಕಲಂ 118(1) ರನ್ವಯ ಮೂರು ವರ್ಷ ಕಾರಾವಾಸ ಅಥವಾ ಇಪ್ಪತ್ತು ಸಾವಿರ ರೂಪಾಯಿ ದಂಡ, ಬಿಎನ್ ಎಸ್ ಕಲಂ 352 ರನ್ವಯ ಎರಡು ವರ್ಷ ಕಾರಾವಾಸ ಅಥವಾ ದಂಡ ಹಾಗೂ ಬಿಎನ್ಎಸ್ 351(2) ಎರಡು ವರ್ಷ ಕಾರಾವಾಸ ಅಥವಾ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪ್ರಾಧಿಕಾರವು ನಿರ್ಧರಿಸಿದಂತೆ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ನಿಯಂತ್ರಿಸುವ ನಿಯಮಗಳಿಗೆ ಅನುಸಾರ ದಂಡ ಅಥವಾ ಇತರ ಕಾನೂನು ಕ್ರಮಗಳು ಒಳಗೊಂಡಿರುತ್ತದೆ. ಸಾರ್ವಜನಿಕರು ಈ ಯೋಜನೆಗೆ ಸಂಪೂರ್ಣ ಸಹಕಾರ ನೀಡಬೇಕು. ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.