ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೆಹಲಿ ನಾಯಕರ ಭೇಟಿಯ ಬಳಿಕ ಕರ್ನಾಟಕ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಪಕ್ಷದ ಯಶಸ್ಸು, ಕರ್ನಾಟಕ ಹಾಗೂ ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ ವೇಣುಗೋಪಾಲ್, ಸುರ್ಜೇವಾಲ್ ಎಲ್ಲರನ್ನು ಭೇಟಿ ಮಾಡಿದ್ದೇನೆ ಎಂದರು. ಅಧಿಕಾರ ಹಂಚಿಕೆಯ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಾವು ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ನಾವು ರಾಜಕಾರಣದಲ್ಲಿ ಇದ್ದೇವೆ. ರಾಜಕೀಯ ಮಾಡಲೇಬೇಕು. ನನಗೆ ಯಶಸ್ಸು ಸಿಗುತ್ತೆ. ಸ್ವಲ್ಪ ಶ್ರಮ ಬೇಕಾಗುತ್ತದೆ ಎಂದರು.
ನೀವು ತುಂಬಾ ತಾಳ್ಮೆಯಿಂದ ಇದ್ದೀರಿ ಅಂತಾ ಕೇಳಿದಾಗ, ತಾಳ್ಮೆ ಕೂಡ ಸಾಕಷ್ಟು ಫಲ ನೀಡುತ್ತದೆ ಎನ್ನುವ ಮೂಲಕ ನಂಬಿಕೆ ಕಳೆದುಕೊಂಡಿಲ್ಲ ಅಂತಾ ಹೇಳಿದ್ದಾರೆ. ರಾಜಕಾರಣಿಗಳು ಭೇಟಿಯಾದಾಗ ರಾಜಕೀಯ ಚರ್ಚೆ ಮಾಡದೆ ಇರುತ್ತೀವಾ? ಆದ್ರೆ, ಚರ್ಚೆಯ ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸುವುದಿಲ್ಲ. ನಾಯಕತ್ವ ಬದಲಾವಣೆ ಇಲ್ಲವೆಂದು ಯತೀಂದ್ರ ಹೇಳುತ್ತಿದ್ದಾರೆ ಅನ್ನೋ ಮಾತಿಗೆ, ಅವರು ನಮ್ಮ ಹೈಕಮಾಂಡ್ ಅಲ್ಲವೇ, ಅವರ ಮಾತನ್ನು ಸ್ವೀಕರಿಸಬೇಕು ಅಂತಾ ಹೇಳಿದರು.
ಇನ್ನು ಶಾಸಕರ ವಿದೇಶ ಪ್ರವಾಸದ ಬಗ್ಗೆ ಕೇಳಿದಾಗ, ಇದರ ಬಗ್ಗೆ ಮಾಧ್ಯಮಗಳಿಂದಲೇ ತಿಳಿದಿದೆ. ಸಿಎಂ ಅವರಿಗೆ ಯಾವ ಮಾರ್ಗದರ್ಶನ ನೀಡಿದ್ದಾರೆ ಗೊತ್ತಿಲ್ಲ. ಶಾಸಕರುಂಟು ಮುಖ್ಯಮಂತ್ರಿಗಳುಂಟು. ಮಾಧ್ಯಮಗಳಿಂದ ಮಾಹಿತಿ ತಿಳಿದಿದೆ. ಈ ಬಗ್ಗೆ ಯಾರಿಂದಲೂ ಗೊತ್ತಾಗಿಲ್ಲ ಎಂದರು.




