ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ತಮಿಳು ಸ್ಟಾರ್ ನಟ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿದ ಹೇಳಿಕೆ ವಿರುದ್ಧ ದಿನದಿಂದ ದಿನಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ವಿರುದ್ಧ ಪ್ರಕರಣಗಳು ಸಹ ದಾಖಲಾಗುತ್ತಿವೆ. ಇದೀಗ ನಿರ್ಮಾಪಕ ಕೆ.ಮಂಜು ಸಹ ನಟ ಕಮಲ್ ಹಾಸನ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ನನಗೆ ಹಣಕ್ಕಿಂತ ಭಾಷೆ ಮುಖ್ಯ. ಭಾಷೆಯನ್ನು ಮಾರಾಟಕ್ಕಿಟ್ಟು ಹಣ ಮಾಡುವ ಅನಿವಾರ್ಯತೆ ಇಲ್ಲ. ರಾಮ ಶಾಮ ಭಾಮ ಸಿನಿಮಾ ಮರು ಬಿಡುಗಡೆ ಮಾಡಲ್ಲ ಎಂದಿದ್ದಾರೆ.
ನಾನು ಪ್ರೀತಿಯಿಂದ ಹೇಳಿದ್ದೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ನಾವೂ ಅಷ್ಟೇ ಪ್ರೀತಿಯಿಂದ ಕ್ಷಮೆ ಕೇಳಿ ಎನ್ನುತ್ತಿದ್ದೇವೆ. ಅವರು ಕ್ಷಮೆ ಕೇಳಿದರೆ ದೊಡ್ಡವರಾಗುತ್ತಾರೆ. ಕನ್ನಡಿಗರಿಗೆ ಆದ ನೋವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ. ನಟ ದರ್ಶನ್, ನಟ ಜಗ್ಗೇಶ್, ನಟಿ ರಚಿತಾ ರಾಮ್ ಸಹ ಈ ಬಗ್ಗೆ ಧ್ವನಿ ಎತ್ತಿದ್ದಾರೆ.