ಪ್ರಜಾಸ್ತ್ರ ಸುದ್ದಿ
ಚಂಡೀಗಢ(Chandigarh): ಐಪಿಎಲ್-2025ರ ಟೂರ್ನಿಯ ಮೊದಲ ಕ್ವಾಲಿಫೈ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್ ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 8 ವರ್ಷಗಳ ಬಳಿಕ ಫೈನಲ್ ಗೆ ಲಗ್ಗೆ ಇಟ್ಟಿದ್ದು, 18 ವರ್ಷಗಳ ಕಪ್ ಗೆಲುವಿನ ಬರವನ್ನು ನೀಗಿಸಲು ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಆರ್ ಸಿಬಿ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟಿದೆ.
ಮುಲ್ಲನ್ ಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡದ ನಾಯಕ ರಜತ್ ಪಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ಪ್ಲಾನ್ ಅನ್ನು ಬೌಲರ್ ಗಳು ಯಶಸ್ವಿಗೊಳಿಸಿದರು. ಸುಯೇಶ್ ಶರ್ಮಾ ಹಾಗೂ ಹಜಲ್ ವುಡ್ ತಲಾ 3 ವಿಕೆಟ್ ಪಡೆದು ಪಂಜಾಬ್ ಪಡೆಯನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಯಶ್ ದಯಾಳ್ 2 ವಿಕೆಟ್ ಪಡೆದು ಇವರಿಗೆ ಸಾಥ್ ನೀಡಿದರು. ಭುವನೇಶ್ವರ್ ಕುಮಾರ್ ಹಾಗೂ ರೊಮಾರಿಯೊ ಶಫರ್ಡ್ ತಲಾ 1 ವಿಕೆಟ್ ಪಡೆದರು. ಇದರ ಪರಿಣಾಮ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡ 14.1 ಓವರ್ ಗಳಲ್ಲಿ ಕೇವಲ 101 ರನ್ ಗಳಿಗೆ ಆಲೌಟ್ ಆಯಿತು.
ಈ ಅಲ್ಪ ಗುರಿಯನ್ನು ಬೆಂಗಳೂರು ಹುಡುಗರು ಕೇವಲ 10 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಮುಟ್ಟಿದರು. ಆರಂಭಿಕ ಆಟಗಾರ ಸಾಲ್ಟ್ ಅಜೇಯ 56 ರನ್, ನಾಯಕ ಪಟೀದಾರ್ ಅಜೇಯ 15 ರನ್ ಗಳಿಸಿದರು. ಕೊಹ್ಲಿ 12, ಮಯಾಂಕ್ ಅಗರ್ವಾಲ್ 19 ರನ್ ಗಳಿಸಿ ಔಟ್ ಆದರು. ಪಂಜಾಬ್ ಪರ ಜೇಮಸ್ಸನ್, ಮುಷಿರ್ ಖಾನ್ ತಲಾ 1 ವಿಕೆಟ್ ಪಡೆದರು. ಆರ್ ಸಿಬಿ ಪರ 3 ಓವರ್ ಗಳಲ್ಲಿ 17 ರನ್ ಗಳಿಗೆ 3 ವಿಕೆಟ್ ಕಿತ್ತ ಸುಯೇಶ್ ಶರ್ಮಾ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದ್ದು, ನಾಳೆ ನಡೆಯಲಿರುವ ಕ್ವಾಲಿಫೈ 2 ಪಂದ್ಯದಲ್ಲಿ ಮುಂಬೈ ಹಾಗೂ ಲಖನೌ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡದೊಂದಿಗೆ ಪಂಜಾಬ್ ಎದುರಾಗಲಿದ್ದು, ಇವುಗಳಲ್ಲಿ ಫೈನಲ್ ಬರುವ ತಂಡ ಆರ್ ಸಿಬಿ ಎದುರಿಸಲಿದೆ.