ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Benagloru): ನಟ ದರ್ಶನ್ ಹಾಗೂ ತಂಡದಿಂದ ಹತ್ಯೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಅಸಲಿ ಮುಖ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ. ಆತ ಏನೇ ಮಾಡಿದರೂ ಕಾನೂನು ಅಡಿಯಲ್ಲಿ ಶಿಕ್ಷೆ ಕೊಡಿಸಲು ಸಾಕಷ್ಟು ಅವಕಾಶಗಳಿದ್ದವು ಎನ್ನುವುದು ನಿಜ. ಈಗ ಎಲ್ಲವೂ ಕೈ ಮೀರಿ ಹೋಗಿದೆ. ರೇಣುಕಾಸ್ವಾಮಿ ಬಗ್ಗೆ ಅನುಕಂಪ ತೋರಿಸುವವರಿಗೂ ಆತನ ಅಸಲಿ ಮುಖದ ಬಗ್ಗೆ ಕೇಳಿದರೆ ಶಾಕ್ ಆಗುತ್ತೆ.
ಪವಿತ್ರಾಗೌಡ ಹತ್ತಿರ ನಾಲ್ಕು ಇನ್ಸ್ಟಾಗ್ರಾಮ್ ಖಾತೆ ಇದ್ದವು. ರೇಣುಕಾಸ್ವಾಮಿ ಫೆಬ್ರವರಿಯಿಂದ ಮೆಸೇಜ್ ಮಾಡುತ್ತಿದ್ದ. Gowtham_ks-1990 ಎನ್ನುವ ಖಾತೆಯಿಂದ ಅಶ್ಲೀಲ ವಿಡಿಯೋ, ಫೋಟೋ ಕಳಿಸುತ್ತಿದ್ದ. ಎಷ್ಟೇ ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದರೂ ಪದೆಪದೆ ಅಶ್ಲೀಲ ವಿಡಿಯೋ, ಫೋಟೋ ಕಳಿಸುತ್ತಿದ್ದನಂತೆ. ಸುಮಾರು 190ಕ್ಕೂ ಹೆಚ್ಚು ಬಾರಿ ರೇಣುಕಾಸ್ವಾಮಿ ಪವಿತ್ರಾಗೌಡಗೆ ಮೆಸೇಜ್ ಮಾಡಿದ್ದಾನೆ ಎನ್ನುವುದು ತಿಳಿದು ಬಂದಿದೆ.
200ಕ್ಕೂ ಹೆಚ್ಚು ಯುವತಿಗೆ ಅಶ್ಲೀಲ ಮೆಸೇಜ್?
ಕೊಲೆಯಾದ ರೇಣುಕಾಸ್ವಾಮಿ ಬರೀ ಪವಿತ್ರಾಗೌಡಗೆ ಮಾತ್ರವಲ್ಲ. ಬರೋಬ್ಬರಿ 200ಕ್ಕೂ ಹೆಚ್ಚು ಯುವತಿಯರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವನೊಬ್ಬ ವಿಕೃತಕಾಮಿಯಾಗಿದ್ದ. ಅವನೇನು ಸಾಚಾ ಅಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಅವನು ಮಾಡಿದ ತಪ್ಪಿಗೆ ಶಿಕ್ಷೆ ಕೊಡಲು ಕಾನೂನು ಇತ್ತು. ಇವನಿಂದ ಮಾನಸಿಕ ಹಿಂಸೆ ಅನುಭವಿಸಿದ್ದ ಯುವತಿಯರಲ್ಲಿ ಯಾರಾದರೂ ಪೊಲೀಸ್ ದೂರು ಸಲ್ಲಿಸಿದ್ದರೆ ಬಹುಶಃ ಅಲ್ಲಿಯೇ ಅವನಿಗೆ ಕಾನೂನು ಅಡಿಯಲ್ಲಿ ಶಿಕ್ಷೆಯಾಗಿ, ಇಂತಹದೊಂದು ಅನಾಹುತವಾಗುತ್ತಿರಲಿಲ್ಲವೇನೋ.