ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಸರಕಾರ ರೂಪಿಸಿರುವ ವರ್ಗಾವಣೆ ನೀತಿಗೆ ವಿರುದ್ಧವಾಗಿ ಅವೈಜ್ಞಾನಿಕ ವರ್ಗಾವಣೆ ನೀತಿಯನ್ನು ಅನುಸರಿಸುತ್ತಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಆಡಳಿತದ ವಿರುದ್ಧ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಫೀಸರ್ಸ್ ಫೆಡರೇಶನ್ ನಿಂದ ಅನಿದಿಷ್ಟ ಅವಧಿ ಉಪವಾಸ ಸತ್ಯಾಗ್ರಹವನ್ನು ಜುಲೈ 8 ರಿಂದ ಆರಂಭಿಸಲಾಗುತ್ತದೆ ಎಂದು ಫೆಡರೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ವರ್ಗಾವಣೆಗಳನ್ನು ಮಾಡುವ ಸಂದರ್ಭದಲ್ಲಿ ಸರ್ಕಾರ ರೂಪಿಸಿರುವ ವರ್ಗಾವಣೆ ನೀತಿಯನ್ನು ಪರಿಗಣಿಸಲಾಗಿಲ್ಲ. ಅವಧಿ ಪೂರ್ವ ವರ್ಗಾವಣೆಗಳನ್ನು ಮಾಡಲಾಗಿದೆ. ನೌಕರ ದಂಪತಿಗಳಿಗೆ ಅನುಕೂಲದ ವ್ಯವಸ್ಥೆಯನ್ನು ಪರಿಗಣಿಸಲಾಗಿಲ್ಲ. ಆರೋಗ್ಯ ಸಂಬಂಧಿತ ಸಮಸ್ಯೆಗಳ ವಿಷಯವನ್ನು ಪರಿಗಣಿಸಲಾಗಿಲ್ಲ. ಅಲ್ಲದೆ ಅವಧಿ ಮುಗಿದವರನ್ನು ಕೆಲವು ಕಡೆ ವರ್ಗಾಯಿಸಿಲ್ಲ. ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲಾಗಿದೆ. ಸ್ವಜನ ಪಕ್ಷಪಾತ ಮಾಡಿರುವುದು ಕಂಡು ಬರುತ್ತದೆ. ಇದನೆಲ್ಲ ಸರಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಅಲ್ಲದೇ ಈ ಹಿಂದಿನ ಲಿಮಿಟೇಶನ್ ಆಕ್ಟ್ ಅನ್ನು ಕಡ್ಡಾಯವಾಗಿ ಪರಿಗಣಿಸಬೇಕು ಮತ್ತು ಈ ಸಂಬಂಧ ಪರ್ಯಾಯವಾಗಿ ರೂಪಿಸಿರುವ ನಿಯಮವನ್ನು ಕೈ ಬಿಡಬೇಕು ಎಂದು ಗ್ರಾಮೀಣ ಬ್ಯಾಂಕ್ ಆಫೀಸರ್ಸ್ ಫೆಡರೇಷನ್ ಬ್ಯಾಂಕ್ ವ್ಯವಸ್ಥಾಪಕ ಮಂಡಳಿಯನ್ನು ಒತ್ತಾಯಿಸಿದೆ. ಇಲ್ಲದೆ ಹೋದಲ್ಲಿ ತಮ್ಮ ಉಪವಾಸ ಸತ್ಯಾಗ್ರಹವು ಅನಿರ್ದಿಷ್ಟ ಅವಧಿಗೆ ಮುಂದುವರೆಯುತ್ತದೆ ಎಂದು ಫೆಡರೇಷನ್ ಅಧ್ಯಕ್ಷ ಲಿಂಗರಾಜ ರೊಡ್ಡನವರ, ಪ್ರಧಾನ ಕಾರ್ಯದರ್ಶಿ ಸಾಗರ ಶಹಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.